ಬಂಗಾರಪೇಟೆ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರ ಜಗಜ್ಜಾಹೀರುಗೊಂಡರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಇದನ್ನು ಖಂಡಿಸಿ ಮಾರ್ಚ್ 12ರಂದು ಡಿ.ಕೆ. ಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಐದು ಗ್ರಾಮ ಪಂಚಾಯಿತಿಗಳಲ್ಲಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಡಿ.ಕೆ. ಹಳ್ಳಿ ವ್ಯಾಪ್ತಿಯ ಶ್ರೀನಗರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯ ಬಳಕೆಯ ವಸ್ತುಗಳ ಬೆಲೆ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಅವಾಂತರ ಸೃಷ್ಟಿಸುತ್ತಲೇ ಇದೆ. ಅದನ್ನು ವಿರೋಧಿಸಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್.ಎನ್. ರೆಸಾರ್ಟ್ ಬಳಿ ಜಮಾಯಿಸಿ ಅಲ್ಲಿಂದ ಬೈಕ್ ರ್ಯಾಲಿ ಆರಂಭಿಸಲಾಗುತ್ತದೆ. ಬಳಿಕ ಡಿ.ಕೆ. ಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬೆಮಲ್ ನಗರದ ಬಳಿಯ ಶ್ರೀನಗರದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಡಿ.ಕೆ. ಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿನ್ನಕೋಟೆ, ದೊಡ್ಡಹೊಲಗಮಾದಿ, ಡಿ.ಕೆ. ಹಳ್ಳಿ, ಹುನುಕುಂದ, ಘಟ್ಟಕಾಮದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಯುವಕರು ಹಾಗೂ ಸಾರ್ವಜನಿಕರು ಬೆಳಿಗ್ಗೆ 8:30 ಗಂಟೆಗೆ ನಿಗದಿತ ಸ್ಥಳಕ್ಕೆ ಬೈಕ್ಗಳೊಂದಿಗೆ ಬರಬೇಕು. ಸ್ವಯಂ ಪ್ರೇರಿತರಾಗಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.