ಕೋಲಾರ: ‘ಪೌರತ್ವದ ಕಾಯ್ದೆ ವಿಚಾರವನ್ನು ಮುಂದಿಟ್ಟುಕೊಂಡು ಭಾವನಾತ್ಮಕವಾಗಿ ಯುವಕರನ್ನು ದಿಕ್ಕು ತಪ್ಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಾಸುದೇವರೆಡ್ಡಿ ಆರೋಪಿಸಿದರು.
ನಗರದ ನಚಿಕೇತ ನಿಲಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ)ನಿಂದ ಶನಿವಾರ ನಡೆದ ೨೮ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಎನ್ಆರ್ಸಿ, ಎಸ್ಎಎ ಕಾಯ್ದೆಯೇ ಸರ್ಕಾರಗಳಿಗೆ ದೊಡ್ಡ ಅಸ್ತ್ರಗಳಾಗಿದ್ದು, ಪ್ರಜಾಪ್ರಭುತ್ವ ಶಕ್ತಿಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಶೈಕ್ಷಣಿಕ ಕ್ಷೇತ್ರವನ್ನು ಖಾಸಗಿಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜಾತ್ಯತೀತ ಮೌಲ್ಯಗಳ ವಿರುದ್ಧ ನೀತಿಗಳನ್ನು ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿದೆ. ಶುಲ್ಕ ಏರಿಕೆ, ಡೊನೇಶನ್ ಹಾವಳಿಗೆ ರತ್ನಗಂಬಳಿ ಹಾಸುತ್ತಿದೆ. ಶ್ರೀಮಂತರು ಮಾತ್ರ ಶಿಕ್ಷಣವನ್ನು ಪಡೆಯುವಂತಾಗಬೇಕು ಎಂಬ ನೀತಿಯನ್ನು ಜಾರಿಗೆ ತರಲು ಮುಂದಾಗಿದ್ದು, ಇದರ ವಿರುದ್ಧ ಹೋರಾಟಕ್ಕೆ ಸಿದ್ದರಾಗಬೇಕು’ ಎಂದು ಎಚ್ಚರಿಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಯಕುಮಾರಿ ಮಾತನಾಡಿ, ‘ಹೋರಾಟದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ವಿದ್ಯಾರ್ಥಿಗಳು ಸಂಘಟಿತರಾಗಿ ಎಸ್ಎಫ್ಐಗೆ ಬಲ ತುಂಬಬೇಕು’ ಎಂದು ಸಲಹೆ ನೀಡಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಮಾತನಾಡಿ, ‘ರಾಜ್ಯದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದ್ದು, ಖಜಾನೆ ಖಾಲಿಯಾಗಿದೆ. ಪರಿಣಾಮಕಾರಿಯಾಗಿ ಶಿಕ್ಷಣ ಕೇತ್ರ ಪ್ರಗತಿ ಕಾಣುತ್ತಿಲ್ಲ. ಇದರ ಜತೆಯಲ್ಲೇ ಸರ್ಕಾರ ಶಿಕ್ಷಣದ ಕೇಸರಿಕರಣಕ್ಕೆ ನಡೆಸಿರುವ ಹುನ್ನಾರ ಅಪಾಯಕಾರಿ. ಇದರ ವಿರುದ್ದ ವಿದ್ಯಾರ್ಥಿ ಸಮುದಾಯ ಹೋರಾಟ ರೂಪಿಸಬೇಕು’ ಎಂದು ಹೇಳಿದರು.
ಎಸ್ಎಫ್ಐನ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಬೀರಾಜು, ತಾಲ್ಲೂಕು ಕಾರ್ಯದರ್ಶಿ ಶ್ರೀಕಾಂತ್, ಸದಸ್ಯರಾದ ಅಂಕಿತಾ, ಮಹೇಶ್, ಗಾಯಿತ್ರಿ ಹಾಜರಿದ್ದರು.