ನಂಗಲಿ: ಮನೆಯ ಬೀಗ ಮುರಿದು ನಗದು, ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ನಂಗಲಿ ಹಾಸ್ಟೆಲ್ ರಸ್ತೆಯಲ್ಲಿರುವ ಅಖಿಲಾ ತಾಜ್ ಮತ್ತು ಸೈಯದ್ ಅಕ್ಮಲ್ ದಂಪತಿಯ ಮನೆಗೆ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ₹ 1.5 ಲಕ್ಷ ನಗದು, 80 ಗ್ರಾಂ ಚಿನ್ನಾಭರಣ ಹಾಗೂ 50 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ.
ಸೈಯದ್ ಅಕ್ಮಲ್ ಬೆಂಗಳೂರಿನಲ್ಲಿ ಮರಗೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ತನ್ನ ಚಿಕ್ಕ ಮಕ್ಕಳೊಂದಿಗೆ ಒಂಟಿಯಾಗಿರುತ್ತಿದ್ದ ಅವರ ಪತ್ನಿ ಪಕ್ಕದ ಬೀದಿಯಲ್ಲಿ ಇರುವ ತನ್ನ ತಾಯಿ ಮನೆಯಲ್ಲಿ ಮಲಗುತ್ತಿದ್ದರು. ಮಂಗಳವಾರ ರಾತ್ರಿ ಅವರು ತಾಯಿ ಮನೆಯಲ್ಲಿ ಮಲಗಿದ್ದಾಗ ಈ ದುಷ್ಕೃತ್ಯ ಎಸಗಲಾಗಿದೆ.
ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಯಿಸಲಾಗಿತ್ತು. ಡಿವೈಎಸ್ಪಿ ಜಯಶಂಕರ್, ಪಿಎಸ್ಐ ವಿ. ವರಲಕ್ಷ್ಮಮ್ಮ ಭೇಟಿ ನೀಡಿ ಪರಿಶೀಲಿಸಿದರು.