ಕೋಲಾರ: ಕೋವಿಡ್ ಸಂದರ್ಭದಲ್ಲಿ ದೇಶದ ಅರ್ಥ ವ್ಯವಸ್ಥೆ ತಲ್ಲಣಗೊಂಡಿದ್ದರೂ ಉತ್ಪಾದಕರಿಂದ ಹಾಲು ಪೂರೈಕೆಗೆ ರಜೆ ನೀಡದೆ ಅವರ ಬೆನ್ನೆಲುಬಿಗೆ ಒಕ್ಕೂಟ ನಿಂತಿದೆ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ. ಹರೀಶ್ ತಿಳಿಸಿದರು.
ನಗರದ ಸಹಕಾರ ಯೂನಿಯನ್ ಕಚೇರಿಯಲ್ಲಿ ಕೋಚಿಮುಲ್ ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್ ವತಿಯಿಂದ ಗುರುವಾರ ತಾಲ್ಲೂಕಿನ ಹಾಲು ಉತ್ಪಾದಕರು, ಸಂಘಗಳ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಒಕ್ಕೂಟದಲ್ಲಿ ತಿಂಗಳಿಗೆ ₹ 8 ಕೋಟಿ ನಷ್ಟ ಅನುಭವಿಸುತ್ತಿದ್ದರೂ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ರಜೆ ನೀಡಲಿಲ್ಲ. ಹಾಲು ಖರೀದಿಸುವ ಮೂಲಕ ಉತ್ಪಾದಕರ ಬೆನ್ನಿಗೆ ನಿಂತಿದೆ. ಮುಂದಿನ ದಿನಗಳಲ್ಲೂ ನಿರಂತರವಾಗಿ ನಿಮ್ಮ ಜೊತೆ ಒಕ್ಕೂಟ ನಿಲ್ಲುತ್ತದೆ ಎಂದರು.
ಒಕ್ಕೂಟದಲ್ಲಿ ಕಲ್ಯಾಣ ದತ್ತಿನಿಧಿಯಡಿ ಪ್ರತಿವರ್ಷ 24 ಕಾರ್ಯಕ್ರಮಗಳಿಗೆ ಹಣ ನೀಡಲು ಅವಕಾಶವಿದೆ. ದತ್ತಿನಿಧಿ ಹಣ ಹಾಗೂ ನನ್ನ ಸ್ವಂತ ಹಣದಲ್ಲಿ ತಾಲ್ಲೂಕಿನ 12 ಸಾವಿರ ಹಾಲು ಉತ್ಪಾದಕರು, ನೌಕರರು, ಆಟೊ ಚಾಲಕರು, ಬಿಸಿಯೂಟ ಸಿಬ್ಬಂದಿ, ಬೀದಿಬದಿ ವ್ಯಾಪಾರಿಗಳು, ಸಫಾಯಿ ಕರ್ಮಚಾರಿಗಳು ಸೇರಿದಂತೆ 20 ಸಾವಿರ ಮಂದಿಗೆ ₹ 60 ಲಕ್ಷ ವೆಚ್ಚದಲ್ಲಿ ಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು.
ಯಲವಾರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಯಲವಾರ ಸೊಣ್ಣೇ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಮರ್ಪಕ ವಾಗಿ ನೀರಿನ ಆಸರೆ ಇಲ್ಲದೇ ಇದ್ದರೂ ಹೈನುಗಾರಿಕೆ ಕ್ಷೇತ್ರದಿಂದ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಕೊರೊನಾ ಬಂದಾಗಿನಿಂದ ಇದುವರೆಗೂ ಹಾಲು ಸಂಗ್ರಹ ನಿಲ್ಲದೇ ನೌಕರರು ಭಯಪಡದೇ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ತಿಪ್ಪಾರೆಡ್ಡಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸಿದ್ದು ಹಾಲು ಉತ್ಪಾದಕರು. ದೇಶದಲ್ಲಿ ರೈಲು, ವಿಮಾನ ಸೇರಿದಂತೆ ಎಲ್ಲವೂ ಸ್ತಬ್ಧವಾಗಿದ್ದರೂ ಕೊರೊನಾದ ಎರಡೂ ಅಲೆಗಳಲ್ಲಿ ಒಕ್ಕೂಟ ಕೆಲಸ ನಿರ್ವಹಿಸಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಉರಗಲಿ ರುದ್ರಸ್ವಾಮಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೃಷ್ಣೇಗೌಡ, ಕೋಚಿಮುಲ್ ವ್ಯವ ಸ್ಥಾಪಕ ನಿರ್ದೇಶಕ ಶ್ರೀಧರಮೂರ್ತಿ, ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಶಿವರುದ್ರಪ್ಪ, ವಿಸ್ತರಣಾ ಧಿಕಾರಿಗಳಾದ ರಾಮಾಂಜನಪ್ಪ, ನಾಗಪ್ಪ, ಶ್ರೀನಿವಾಸ್ ಹಾಜರಿದ್ದರು.