ಮುಳಬಾಗಿಲು: ಬಿಜೆಪಿ ಪಾಲಿಗೆ ಮುಳ್ಳಾದ ಸಚಿವರು, ಆರೋಪ

ಮುಳಬಾಗಿಲು: ‘ಸಚಿವರಾಗಿರುವ ಎಚ್.ನಾಗೇಶ್ ಅವರು ಗ್ರಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡದೇ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ’ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಹೆಬ್ಬಣಿ ರವಿ ಆರೋಪಿಸಿದರು.
ಈ ಕುರಿತು ಪಕ್ಷದ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ದೂರು ನೀಡಲಾಗಿದೆ.
ತಾಲ್ಲೂಕು ಬಿಜೆಪಿ ಗ್ರಾಮಾಂತರ ಯುವಮೋರ್ಚ ಅಧ್ಯಕ್ಷ ಪ್ರಕಾಶ ರೆಡ್ಡಿ ಮಾತನಾಡಿ, ಪಕ್ಷದವರೇ ಸಚಿವರಾಗಿದ್ದು ತಾಲ್ಲೂಕು ಮಟ್ಟದ 43 ನಾಮಿನಿಗಳಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಲ್ಲ ಎಂದು ಆರೋಪಿಸಿದರು.
ಮುಳಬಾಗಿಲಿನಲ್ಲಿ ಬಿಜೆಪಿ ಇಲ್ಲ ಎಂದು ಸಚಿವರೇ ಹೇಳಿದ್ದಾರೆ. ಈ ಕುರಿತು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಿ ರಾಜ್ಯ ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ತಮ್ಮ ಬಣಕ್ಕೆ ಸೇರಲು ಬಿಜೆಪಿ ಕಾರ್ಯಕರ್ತರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಬೇಕೆಂಬ ಪ್ರಯತ್ನಗಳು ನಡೆಯುವ ವೇಳೆಯಲ್ಲಿ ಮುಳಬಾಗಿಲಿನಲ್ಲಿ ಬಿಜೆಪಿ ಮುಕ್ತ ಮಾಡಲು ಸಚಿವರು ಪ್ರಯತ್ನ ಮಾಡುತ್ತಿರುವುದು ವಿಷಾದನೀಯ ಎಂದರು.
ಬಿಜೆಪಿ ಮುಖಂಡ ಗೊಲ್ಲಹಳ್ಳಿ ಎಂ.ಜಯರಾಮ್, ಹೆಬ್ಬಣಿ ಮಂಜುನಾಥ್ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.