ಕೋಲಾರ: ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶೀಘ್ರವೇ ಶಿಕ್ಷೆಯಾಗಬೇಕು. ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕುವ ವಾತಾವರಣ ಸೃಷ್ಟಿಸಬೇಕು ಎಂದು ಒತ್ತಾಯಿಸಿ ನಗರದ ಮೆಕ್ಕೆ ವೃತ್ತದಲ್ಲಿ ಗುರುವಾರ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಇಂತಹ ಪ್ರಕರಣಗಳು ನಡೆದಾಗ ಶಿಕ್ಷೆಗೆ ಒತ್ತಾಯಿಸಿ ಮಹಿಳೆಯರಿಗೆ ಬೆಂಬಲವಾಗಿ ಪುರುಷರು ನಿಲ್ಲಬೇಕಾಗಿದೆ ಎಂದರು.
ಮುಖಂಡರಾದ ಶಾಂತಮ್ಮ ಮಾತನಾಡಿ, ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಹೆಣ್ಣುಮಕ್ಕಳು ಭಯಭೀತರಾಗಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆಯ ಹೊಣೆ ಹೊತ್ತಿರುವಂತಹ ಜನಪ್ರತಿನಿಧಿಗಳು ಬಾಯಿಗೆ ಬಂದಂತಹ ರೀತಿಯಲ್ಲಿ ಮಾತನಾಡಿ ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.
ಸಂವಾದ ಸಂಸ್ಥೆಯ ಸುನಿತಾ, ವಿವಿಧ ಸಂಘಟನೆಯ ಮುಖಂಡರಾದ ವೆಂಕಟಾಚಲಪತಿ, ಎ. ನಳಿನಿಗೌಡ, ಕೊಂಡರಾಜನಹಳ್ಳಿ ಮಂಜುಳಾ, ನಾರಾಯಣಸ್ವಾಮಿ, ವಿನೋದ್, ರೂಪಾ, ಕೃಷ್ಣಮೂರ್ತಿ, ನವ್ಯಾ, ರುದ್ರೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.