ಕೋಲಾರ: ‘ಸಂಸದ ಮುನಿಯಪ್ಪ 7 ಬಾರಿ ಆಯ್ಕೆಯಾಗಿದ್ದರೂ ಯಾವುದೇ ಸಮುದಾಯದ ಅಭಿವೃದ್ಧಿಗೆ ಸಹಕರಿಸಿಲ್ಲ. ಹೀಗಾಗಿ ಸಮುದಾಯವು ಈ ಬಾರಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಅವರನ್ನು ಬೆಂಬಲಿಸುತ್ತದೆೆ’ ಎಂದು ಸವಿತಾ ಸಮಾಜ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ತಿಳಿಸಿದರು.
ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸವಿತಾ ಸಮುದಾಯದ ಕೆಲ ಮುಖಂಡರು ಬೆಂಗಳೂರಿನಿಂದ ಕೋಲಾರಕ್ಕೆ ಬಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸುವುದು ಜನರ ವೈಯಕ್ತಿಕ ಹಕ್ಕು. ಸಮುದಾಯದಿಂದ ಜನಪ್ರತಿನಿಧಿಯಾದ ಮಾತ್ರಕ್ಕೆ ಒಂದು ಪಕ್ಷ ಬೆಂಬಲಿಸುವುದು ತಪ್ಪು’ ಎಂದು ಖಂಡಿಸಿದರು.
‘ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಸಮುದಾಯದ ಮುಖಂಡರೊಂದಿಗೆ ಚರ್ಚಿಸದೆ ಕಾಂಗ್ರೆಸ್ಗೆ ಬೆಂಬಲ ಘೋಷಿಸಿರುವುದಕ್ಕೆ ನಮ್ಮ ಒಪ್ಪಿಗೆಯಿಲ್ಲ. ನಮಗೆ ಮತದಾನದ ಹಕ್ಕು ಬಂದ ನಂತರ ಕಾಂಗ್ರೆಸ್, ಜೆಡಿಎಸ್ ಬೆಂಬಲಿಸುತ್ತಾ ಬಂದಿದ್ದೇವೆ. ಆದರೆ, ಕೇಂದ್ರದಲ್ಲಿ ದೀರ್ಘ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವಾಗಲಿ ಹಾಗೂ ಸಂಸದ ಮುನಿಯಪ್ಪ ಅವರಾಗಲಿ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ’ ಎಂದು ದೂರಿದರು.
ಬದಲಾವಣೆ ಬಯಸಿದೆ: ‘ಈ ಬಾರಿ ಸವಿತಾ ಸಮಾಜ ಬದಲಾವಣೆ ಬಯಸಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮ ಪ್ರಧಾನಿ ಮಾಡಲು ನಿರ್ಧರಿಸಿದೆ. ದೇಶಕ್ಕಾಗಿ ಮೋದಿ- ಮೋದಿಗಾಗಿ ನಾವು ಎಂಬ ಗುರಿಯೊಂದಿಗೆ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿ ಮುನಿಸ್ವಾಮಿ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಸವಿತಾ ಸಮಾಜ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶಂಕರಮೂರ್ತಿ, ಬಿ.ನಾರಾಯಣಸ್ವಾಮಿ, ಸಿ.ರಘುಪತಿ, ಕೆ.ನರಸಿಂಹಮೂರ್ತಿ, ಶಿವಕುಮಾರ್, ಡಿ.ಸರ್ವೋದಯ ಹಾಜರಿದ್ದರು.