ಕೋಲಾರ: ಸಂವಿಧಾನವು ಇಂದು ಅಭದ್ರತೆಯಿಂದ ಕೂಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದರೆಂಬ ಕಾರಣಕ್ಕಾಗಿಯೇ ಸಂವಿಧಾನವನ್ನು ತೆರೆಮರೆಗೆ ಸರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ವಿ. ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಈಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಶಾಖೆಯಿಂದ ಸಂವಿಧಾನ ಸಂರಕ್ಷಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಡಿ. ಚಿಕ್ಕಣ್ಣ ಮಾತನಾಡಿ, ಸುಭದ್ರ ಸಂವಿಧಾನದಿಂದ ದೇಶ ಇಂದಿಗೂ ನೆರೆ ರಾಷ್ಟ್ರಗಳ ಮುಂದೆ ಬಲಿಷ್ಠ ರಾಷ್ಟ್ರಗಳಲ್ಲೊಂದಾಗಿದೆ ಎಂದರು.
ಉಪನ್ಯಾಸಕ ಶ್ರೀನಿವಾಸ್ ವಿಚಾರ ಮಂಡಿಸಿ, ಭಾರತದ ಸಂವಿಧಾನ ಶ್ರೇಷ್ಠವಾದುದು. ಈ ದೇಶವು ಬಹುತ್ವಗಳಿಂದ ಕೂಡಿದ ಏಕತೆಯ ರಾಷ್ಟ್ರ. ಇಲ್ಲಿ ಜಾತಿ, ಧರ್ಮ ಸಾಮಾಜಿಕವಾಗಿ ಅನೇಕ ಸಮಸ್ಯೆಗಳಿವೆ. ಭಾರತದ ಈ ಎಲ್ಲಾ ಸಮಸ್ಯೆಗಳಿಗೆ ಸಂವಿಧಾನವೇ ಪರಿಹಾರ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಪಿ. ನಾಗರಾಜ್, ಹಾರ್ಜೇನಹಳ್ಳಿ ಕೃಷ್ಣಪ್ಪ, ವಡಗೇರಿ ಕೆ. ಮುನಿವೆಂಕಟಪ್ಪ, ಎನ್. ನಟರಾಜ್, ಡಿ. ಮುನಿಯಪ್ಪ, ಎಸ್.ಡಿ. ಮುನಿಸ್ವಾಮಿ, ಮುಗದುಮ್ ಶರೀಫ್, ಶಾರದಮ್ಮ, ವೆಂಕಟಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ, ದ್ಯಾವಮ್ಮ ಇದ್ದರು.