ಕೋಲಾರ: ‘ಭಾರತರತ್ನ ಅಂಬೇಡ್ಕರ್ ಅವರು ದಾರಿದೀಪವಾಗಿ ಸಂವಿಧಾನ ನೀಡಿದ್ದು, ಅದರಡಿ ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿದ್ದೇವೆ. ಜತೆಗೆ ಮೀಸಲಾತಿ ಸೌಲಭ್ಯ ಪಡೆದಿದ್ದೇವೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಹೇಳಿದರು.
ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ‘ಗಣರಾಜ್ಯೋತ್ಸವವು ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಮಹಾ ಸುದಿನ. ಜತೆಗೆ ದೇಶಕ್ಕೆ ಸಂವಿಧಾನ ಸಿಕ್ಕಿದ ಮಹತ್ವದ ದಿನ’ ಎಂದು ತಿಳಿಸಿದರು.
‘ದೇಶದಲ್ಲಿ ಅಸಮಾನತೆ ತೊಲಗಿಸಲು ಸಂವಿಧಾನವೇ ಅಸ್ತ್ರವಾಗಿದ್ದು, ನಾವೆಲ್ಲಾ ಅದಕ್ಕೆ ಪವಿತ್ರ ಸ್ಥಾನ ನೀಡಿದ್ದೇವೆ. ಚುನಾವಣೆ, ಆಡಳಿತ ಎಲ್ಲವೂ ಸಂವಿಧಾನದಡಿಯೇ ನಡೆಯುತ್ತಿದೆ. ‘ಸಂವಿಧಾನ ಪಾಲಿಸುವುದು ಮತ್ತು ಗೌರವಿಸುವುದು ಭಾರತೀಯನ ಕರ್ತವ್ಯ. ಸಮಾಜದ ಎಲ್ಲರ ಏಳಿಗೆಗೆ ಸಂವಿಧಾನ ಅಡಿಪಾಯ’ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿಗಳಾದ ಶಿವಕುಮಾರ್, ರವಿ, ಮಾಜಿ ಅಧ್ಯಕ್ಷ ಕೆ.ಬಿ.ಅಶೋಕ್ ಪಾಲ್ಗೊಂಡರು.