ಬಂಗಾರಪೇಟೆ: ಪಟ್ಟಣದ ವಾಸಿಮ್ ಅಹ್ಮದ್ ಮುಜಾವರ್ ಅವರು ಸ್ವಂತ ಖರ್ಚಿನಲ್ಲಿ ಊರು ಕೇರಿ ಸುತ್ತಿ ಕೋವಿಡ್-19 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಟಿವಿಎಸ್ ದ್ವಿಚಕ್ರ ವಾಹನದಲ್ಲಿ ತನ್ನದೇ ಧ್ವನಿವರ್ಧಕ, ಬ್ಯಾಟರಿ ಮತ್ತು ಛತ್ರಿ ಅಳವಡಿಸಿಕೊಂಡು ಪಟ್ಟಣ ಅಲ್ಲದೆ ಗ್ರಾಮಗಳಿಗೆ ಸಂಚರಿಸುತ್ತಿದ್ದಾರೆ.
ಪಟ್ಟಣದಲ್ಲಿ ತರಕಾರಿ ಹರಾಜು ಪ್ರಕ್ರಿಯೆ ಮುಂಜಾನೆ 4 ಗಂಟೆಗೆ ಆರಂಭವಾಗುತ್ತದೆ. ಇಲ್ಲಿಂದ ಇವರ ಜಾಗೃತಿಯೂ ಆರಂಭವಗುತ್ತದೆ. ಮಧ್ಯಾಹ್ನದವರೆಗೆ ಪಟ್ಟಣದಲ್ಲಿ ಸಂಚರಿಸಿ, ಸಂಜೆ ಹಳ್ಳಿಗಳಿಗೆ ತೆರಳಿ ಅರಿವು ಮೂಡಿಸುವ ಮೂಲಕ 'ಕೊರೊನಾ ವಾರಿಯರ್' ಆಗಿ ಕೆಲಸ ಮಾಡುತ್ತಿದ್ದಾರೆ.
ಟೇಕಲ್ ರಸ್ತೆಯ ಮಾಕಾರಹಳ್ಳಿ, ಯಲುವಳ್ಳಿ, ಟೇಕಲ್, ಪಾರ್ಸಿಗಾನಹಳ್ಳಿ, ಸೂಲಿಕುಂಟೆ ಮಾದಮಂಗಲ, ಕನಿಂಬೆಲೆ ದೊಡ್ಡ ಅಂಕಂಡಹಳ್ಳಿ, ಕಾರಹಳ್ಳಿ ಸೇರಿದಂತೆ ಹಲ ಗ್ರಾಮಗಳಲ್ಲಿ ಅರಿವು ಮೂಡಿಸಿದ್ದಾರೆ.
ನಿತ್ಯ 100ರಿಂದ 150 ಕಿ.ಮೀಟರ್ ಸಂಚರಿಸಿ ಜಾಗೃತಿ ಮೂಡಿಸುತ್ತಿರುವೆ. ತಿಂಗಳಿಂದ ಈ ಕಾಯಕದಲ್ಲಿ ತೊಡಗಿದ್ದು, ಆರಂಭದಲ್ಲಿ ಎರಡು ದಿನ ಇಂಡಿಕಾ ಕಾರು ಬಳಸುತ್ತಿದ್ದೆ. ಖರ್ಚು ಜಾಸ್ತಿಯಾದ ಕಾರಣ ದ್ವಿಚಕ್ರ ವಾಹನ ಬಳಸುತ್ತಿದ್ದೇನೆ ಎಂದು ವಾಸಿಮ್ ಅಹ್ಮದ್ ಹೇಳುತ್ತಾರೆ.
ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬದ ಉಸ್ತುವಾರಿಯನ್ನು ಇವರೇ ವಹಿಸುತ್ತಾರೆ. ಅಲ್ಲದೆ. ತನ್ನ ಸೌಂಡ್ ಸಿಸ್ಟಂ ಅಂಗಡಿಗೆ 'ರಾಮಜ್ಯೋತಿ' ಎಂದು ಹೆಸರು ಇಟ್ಟಿದ್ದು, ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಕೈ ಜೋಡಿಸಿದ್ದಾರೆ.