ಕೋಲಾರ: ‘ಸಂಘದಲ್ಲಿ ಹಿಂದೆ ಆಗಿರುವ ವ್ಯತ್ಯಾಸಗಳನ್ನು ರೈತರರು ಆರ್ಥಿಕವಾಗಿ ಸಬಲರಾಗಲು ಸಹಕರಿಸಬೇಕು’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಸಲಹೆ ನೀಡಿದರು.
ತಾಲ್ಲೂಕಿನ ಮಂಗಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ರೈತರು ಹೈನೋದ್ಯಮ ನಂಬಿ ಜೀವನ ನಡೆಸುತ್ತಿದ್ದಾರೆ. ಈ ರೈತರಿಗೆ ಸೌಕರ್ಯ ಕಲ್ಪಿಸಬೇಕೇ ಹೊರತು ಮೋಸ ಮಾಡಬಾರದು’ ಎಂದು ಕಿವಿ ಮಾತು ಹೇಳಿದರು.
‘ಒಕ್ಕೂಟವು ಪ್ರತಿ ವರ್ಷ ₹ 1,400 ಕೋಟಿ ವ್ಯವಹಾರ ನಡೆಸುತ್ತಿದೆ. ಇದೆ ಹಾಲಿನ ಮಾರಾಟಕ್ಕೆ ಸಮಸ್ಯೆಯಾಗಿದ್ದು, ಹಾಲಿನ ಪುಡಿ ತಯಾರಿಕೆಗಾಗಿ ಆಂಧ್ರಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ದೇಶದ ಸೈನಿಕರಿಗೆ ಹಾಲು ಹಾಲು ತಿರುಪತಿಯ ಲಡ್ಡು ತಯಾರಿಕೆಗೆ ತುಪ್ಪ ಕಳುಹಿಸಲಾಗುತ್ತಿದೆ’ ಎಂದರು.
‘ಜಿಡ್ಡು ಮತ್ತು ಘನ ಕೊಬ್ಬಿನ ಅಂಶದ (ಎಸ್ಎನ್ಎಫ್) ಆಧಾರದಲ್ಲಿ ಹಾಲಿನ ಖರೀದಿ ದರ ನಿಗದಿ ಮಾಡಿದ ಮೇಲೆ ಪಶು ಆಹಾರಕ್ಕೆ ಬೇಡಿಕೆ ಹೆಚ್ಚಿದೆ. ಬಿಎಂಸಿ ಕೇಂದ್ರಗಳು ಸ್ಥಾಪನೆಯಾದ ನಂತರ ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಾಯಿತು, ಬಾಕಿ ಇರುವ ಸಂಘಗಳಲ್ಲೂ ಬಿಎಂಸಿ ಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ ಮಾತನಾಡಿ ರಾಸುಗಳಿಗೆ ಕಡ್ಡಾಯವಾಗಿ ವೈದ್ಯಕೀಯ ವಿಮೆ ಮಾಡಿಸಿಕೊಳ್ಳಬೇಕು, ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ರಾಸುಗಳಿಗೆ ಆರೋಗ್ಯ ಲಸಿಕೆಗಳನ್ನು ಹಾಕಿಸಬೇಕು’ ಎಂದು ಸಲಹೆ ನೀಡಿದರು.
ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿ.ಶ್ರೀನಿವಾಸ್, ಸಂಘದ ಅಧ್ಯಕ್ಷೆ ಟಿ.ಚೌಡಮ್ಮ, ಒಕ್ಕೂಟದ ವಿಸ್ತಾರಣಾಧಿಕಾರಿ ವಿ.ರಾಜಬಾಬು, ಸಂಘದ ನಿರ್ದೇಶಕರಾದ ಟಿ.ಎಂ.ನಾಗೇಂದ್ರ, ಬಿ.ವೆಂಕಟೇಶಪ್ಪ ನಾರಾಯಣಪ್ಪ, ಎಸ್.ನಾರಾಯಣಸ್ವಾಮಿ, ಈರಪ್ಪ, ಲಕ್ಷ್ಮಿದೇವಮ್ಮ ಹಾಜರಿದ್ದರು