ಮುಳಬಾಗಿಲು: ಕೆಲಸ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ತಾಲ್ಲೂಕಿನ ತಿರುಮನಹಳ್ಳಿ ಗ್ರಾಮದ ಯುವಕ ರಾಮಮೂರ್ತಿ (28)ಯನ್ನು ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಈ ಹಿನ್ನೆಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ತಾಯಲೂರು ಗ್ರಾಮ ಪಂಚಾಯಿತಿ ಎದುರು ಶವವಿಟ್ಟು ಸಂಬಂಧಿಕರು ಪ್ರತಿಭಟಿಸಿದರು.
ಫೆಬ್ರುವರಿ 11ರಂದು ಮಧ್ಯಾಹ್ನ 3ಕ್ಕೆ ದೇವರಾಜ್ ಮತ್ತು ಸುನಿಲ್ ಕಾರಿನಲ್ಲಿ ಉದ್ಯೋಗ ಕೊಡಿಸುವುದಾಗಿ ರಾಮಮೂರ್ತಿಯನ್ನು ಕನ್ನಮಂಗಲ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ತಡರಾತ್ರಿಯವರೆವಿಗೂ ಪಾರ್ಟಿ ಮಾಡಿದ್ದಾರೆ.
ಈ ವೇಳೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಕುತ್ತಿಗೆ ಟವಲ್ನಿಂದ ಬಿಗಿದಿ ಸಾಯಿಸಲು ಯತ್ನಿಸಿದ್ದಾರೆ. ಬಳಿಕ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ರಾಮಮೂರ್ತಿ ಅವರ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಬಳಿಕ ಕೋಲಾರದ ಜಾಲಪ್ಪ ಆಸ್ಪತ್ರೆಗೆ ರಾಮಮೂರ್ತಿಯನ್ನು ಸ್ಥಳಾಂತರಿಸಿದ್ದಾರೆ. ಚಿಕಿತ್ಸೆ ಫಲಿಸದೆ ಶುಕ್ರವಾರ (ಫೆ.15) ರಂದು ರಾಮಮೂರ್ತಿ ಮೃತಪಟ್ಟಿದ್ದಾರೆ.
ಬೆಂಗಳೂರಿಗೆ ಕರೆದೊಯ್ದು ಸ್ನೇಹಿತರ ಹುಟ್ಟುಹಬ್ಬದಂದು ಪಾರ್ಟಿ ಏರ್ಪಡಿಸಿ ರಾಮಮೂರ್ತಿಗೆ ಮದ್ಯ ಸೇವನೆಗೆ ಒತ್ತಾಯಿಸಿದಾಗ ನಿರಾಕರಿಸಿದ ಕಾರಣ ದೇವರಾಜ್, ಸುನೀಲ್ ಮತ್ತಿತರರು ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಮೃತನ ಪಾಲಕರು ಆರೋಪಿದರು.
ಈ ಸಂಬಂಧ ಬೆಂಗಳೂರು ಕಾಡುಗೋಡಿ ಪೊಲೀಸರು ತಾಯಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮನಾಗರಾಜ್ ಪುತ್ರ ದೇವರಾಜ್ ಮತ್ತು ಪಕ್ಕದ ಮನೆಯ ಸುನೀಲ್ ಎಂಬುವರನ್ನು ಬಂಧಿಸಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.