ಕೆಜಿಎಫ್: ‘ಬಾಬು ಜಗಜೀವನ ರಾಂ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ, ಚಿಂತನೆ ಮತ್ತು ಸಾಧನೆಗಳನ್ನು ತಿಳಿಸುವ ಕೆಲಸವನ್ನು ಅವರ ಜಯಂತಿಯಂದು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕಿ ಎಂ. ರೂಪಕಲಾ ಹೇಳಿದರು.
ನಗರದ ಕಿಂಗ್ ಜಾರ್ಜ್ ಹಾಲ್ನಲ್ಲಿ ಬುಧವಾರ ನಡೆದ ಬಾಬು ಜಗಜೀವನ ರಾಂ ಮತ್ತು ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದರಡು ವರ್ಷ ಮಹನೀಯರ ಜಯಂತಿಯನ್ನು ವಿಜೃಂಭಣೆಯಿಂದ ಮಾಡಲು ಸಾಧ್ಯವಾಗಲಿಲ್ಲ. ಜಗಜೀವನ ರಾಂ ಅವರ ಪುತ್ಥಳಿ ನಿರ್ಮಿಸಬೇಕು ಎಂಬ ಕೋರಿಕೆ ಇದ್ದು ಅದನ್ನು ಈಡೇರಿಸಲಾಗುವುದು. ದಲಿತ ಮುಖಂಡರ ಸಲಹೆ ಮತ್ತು ಸೂಚನೆ ಪಡೆದು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಅಂಬೇಡ್ಕರ್ ಅವರ ಸಾಧನೆ ಕುರಿತ ಪುಸ್ತಕವನ್ನು ಪ್ರತಿ ಕಚೇರಿಯಲ್ಲಿ ಇಡಬೇಕು. ಅಂಬೇಡ್ಕರ್ ಉದ್ಯಾನದಲ್ಲಿ ಶಾಶ್ವತ ವೇದಿಕೆ ನಿರ್ಮಾಣ ಮಾಡಬೇಕು. ಡಿವೈಎಸ್ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸಬೇಕು. ದಲಿತರಲ್ಲದ ಇತರೆ ವರ್ಗದವರೂ ಸಕ್ರಿಯವಾಗಿ ಜಯಂತಿಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಬೇಕು ಎಂದು ವಿವಿಧ ಸಂಘಟನೆಯ ಮುಖಂಡರು ಸಲಹೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಕೆ.ಎನ್. ಸುಜಾತಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸುನಿಲ್, ಸಮಾಜ ಕಲ್ಯಾಣಾಧಿಕಾರಿ ಮುನಿರಾಜು ಹಾಜರಿದ್ದರು.