ನರಸಾಪುರ: ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಗಣ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎ.ನಾರಾಯಣಸ್ವಾಮಿ, ‘ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ನಾವೆಲ್ಲಾ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ನೈತಿಕ ಮೌಲ್ಯ ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ದೇಶ ಸೇವೆಗೆ ಬದ್ಧರಾಗಬೇಕು. ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉನ್ನತ ಸಾಧನೆ ಮಾಡುವ ಮೂಲಕ ದೇಶದ ಗೌರವ ಹೆಚ್ಚಿಸಬೇಕು. ಹೋರಾಟಗಾರರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಹೋರಾಟವನ್ನೇ ಉಸಿರಾಗಿಸಿಕೊಂಡು ಬ್ರಿಟೀಷರ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು' ಎಂದು ಸಲಹೆ ನೀಡಿದರು.
‘ಗಣರಾಜ್ಯೋತ್ಸವವು ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಮಹಾ ಸುದಿನ. ಜತೆಗೆ ದೇಶಕ್ಕೆ ಸಂವಿಧಾನ ಸಿಕ್ಕಿದ ಮಹತ್ವದ ದಿನ. ದೇಶದಲ್ಲಿ ಅಸಮಾನತೆ ತೊಲಗಿಸಲು ಸಂವಿಧಾನವೇ ಅಸ್ತ್ರವಾಗಿದ್ದು, ನಾವೆಲ್ಲಾ ಅದಕ್ಕೆ ಪವಿತ್ರ ಸ್ಥಾನ ನೀಡಿದ್ದೇವೆ. ಸಂವಿಧಾನ ಪಾಲಿಸುವುದು ಮತ್ತು ಗೌರವಿಸುವುದು ಭಾರತೀಯನ ಕರ್ತವ್ಯ. ಸಮಾಜದ ಎಲ್ಲರ ಏಳಿಗೆಗೆ ಸಂವಿಧಾನ ಅಡಿಪಾಯ’ ಎಂದು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಗೋಪಿನಾಥ್ ಅಭಿಪ್ರಾಯಪಟ್ಟರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸೊಣ್ಣೇಗೌಡ, ಪ್ರಾಂಶುಪಾಲೆ ನಾಗರತ್ನಮ್ಮ, ಎಸ್ಡಿಎಂಸಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರು ಉಪನ್ಯಾಸಕರಾದ ವೀರಬ್ರಹ್ಮಯ್ಯ, ಶಿವಪ್ರಸಾದ್, ಸಹ ಶಿಕ್ಷಕಿ ರೇಣುಕಾ ಪಾಲ್ಗೊಂಡರು.