ಕೋಲಾರ: ನಗರದ ಅಮ್ಮವಾರಿಪೇಟೆಯ ವರದರಾಜಸ್ವಾಮಿ ದೇವಾಲಯದ ಭಕ್ತರು 400ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಸೋಮವಾರ ದಿನಸಿ ವಸ್ತುಗಳನ್ನು ವಿತರಿಸಿದರು.
‘ದೇವಾಲಯದ ಭಕ್ತ ಮಂಡಳಿಯು ಈ ನೆರವು ನೀಡುತ್ತಿದೆ. ಈಗಾಗಲೇ 420 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡಲಾಗಿದೆ. ಜತೆಗೆ ಅನಾಥಾಲಯಗಳಿಗೂ ಸಹಾಯ ನೀಡುತ್ತಿದ್ದು, ಇನ್ನೂ 100 ಮನೆಗಳಿಗೆ ನೆರವಾಗುವ ಉದ್ದೇಶವಿದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ಮುರಳಿ ರಾಮಾನುಜಂ ತಿಳಿಸಿದರು.
‘ಹೊರ ರಾಜ್ಯದ 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಕುಟುಂಬಗಳು ಕಠಾರಿಪಾಳ್ಯದ ಸಮೀಪ ತಾತ್ಕಾಲಿಕವಾಗಿ ಶೆಡ್ ಹಾಕಿಕೊಂಡು ವಾಸವಿವೆ. ದಿಗ್ಬಂಧನ ಆದೇಶದಿಂದ ಈ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಇವರಿಗೆ ಆಹಾರ ಪದಾರ್ಥ ವಿತರಣೆ ಮಾಡಿದ್ದೇವೆ’ ಎಂದು ಹೇಳಿದರು.
‘ಹಸಿವಿಗೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲ. ನಾವೆಲ್ಲಾ ಭಾರತಾಂಬೆಯ ಮಕ್ಕಳು. ದೇಶ ಸಂಕಷ್ಟಕ್ಕೆ ಸಿಲುಕಿರುವ ಸನ್ನಿವೇಶದಲ್ಲಿ ಬಡ ಜನರಿಗೆ ನೆರವಾಗುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕರು ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.
ಎಸ್ಐ ಶಂಕರ್, ದೇವಾಲಯದ ಭಕ್ತರಾದ ಪ್ರಭಾಕರ್, ಅನಿಲ್ಕುಮಾರ್, ವಿನೋದ್ ಶರ್ಮ ಹಾಜರಿದ್ದರು.