ಮುಳಬಾಗಿಲು: ತಾಲ್ಲೂಕಿನ ದೇವರಾಯಸಮುದ್ರ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ವಿಕಾಸ್ ಸಂಸ್ಥೆ ಸಹಯೋಗದೊಂದಿಗೆ ಕೀಲುಹೊಳಲಿ ಗ್ರಾಮದಲ್ಲಿ ಗುರುವಾರ 250 ಕುಟುಂಬಗಳಿಗೆ ಹಸಿ ಮತ್ತು ಒಣ ಕಸದ ಬುಟ್ಟಿಗಳನ್ನು ವಿತರಿಸಲಾಯಿತು.
ಸ್ವಚ್ಛಭಾರತ್ ಮಿಷನ್ ಯೋಜನೆಯಡಿಯಲ್ಲಿ ನೀಡಲಾದ ಕಸದ ಬುಟ್ಟಿಗಳನ್ನು ಗ್ರಾಮ ವಿಕಾಸ್ ಸಂಸ್ಥೆ ನಿರ್ದೇಶಕ ಎಂ.ವಿ.ಎನ್. ರಾವ್ ಮತ್ತು ಆಡಳಿತಾಧಿಕಾರಿ ಗಿರಿಜೇಶ್ವರಿದೇವಿ, ಪಿಡಿಒ ಶೈಲಜಾ ವಿತರಿಸಿದರು.
ಎಂ.ವಿ.ಎನ್. ರಾವ್, ‘ಗ್ರಾಮಗಳನ್ನು ಕಸಮುಕ್ತ ಗ್ರಾಮಗಳನ್ನಾಗಿ ಮಾಡಬೇಕು. ಬೀದಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ನಿಮ್ಮ ಮನೆಯಲ್ಲಿರುವ ಪ್ಲಾಸ್ಟಿಕ್ ಪೇಪರ್, ತರಕಾರಿ ತ್ಯಾಜ್ಯಗಳನ್ನು ಬೀದಿಗೆ ಎಸೆಯದೆ ಕಸದ ಬುಟ್ಟಿಯಲ್ಲಿ ಹಾಕಿ ಪಂಚಾಯಿತಿಯ ಕಸದ ವಾಹನಕ್ಕೆ ವಾರಕ್ಕೊಮ್ಮೆ ನೀಡಿ. ಈ ಕಸದ ಬುಟ್ಟಿಗಳನ್ನು ಕಸವಿಂಗಡಣೆಗೆ ಮಾತ್ರ ಉಪಯೋಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಗಿರಿಜೇಶ್ವರಿದೇವಿ, ‘ದೇವರಾಯಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 17 ಹಳ್ಳಿಗಳಲ್ಲಿ ಎರಡು ಸಾವಿರ ಕುಟುಂಬಗಳಿಗೆ ಹಂತ ಹಂತವಾಗಿ ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತದೆ’ ಎಂದರು.
‘ಎಂ.ವಿ.ಎನ್. ರಾವ್ ಅವರು 40 ವರ್ಷಗಳಿಂದ ತಮ್ಮ ಸಂಸ್ಥೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೆರವು, ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ನಾರಾಯಣಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂಗಲರಾಯಪ್ಪ, ಮಾಜಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ, ಮುಖಂಡರಾದ ವೆಂಕಟೇಶಪ್ಪ, ರಾಮಪ್ಪ, ಯಲ್ಲಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ ಇದ್ದರು.