ಕೋಲಾರ: ‘ಗ್ರಾಮೀಣ ವಿದ್ಯಾರ್ಥಿಗಳು ಬಿಟ್ಟು ಸಾಧನೆಯತ್ತ ಗಮನಹರಿಸಬೇಕು’ ಎಂದು ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಸಾರಂಗಪಾಣಿ ಕಿವಿಮಾತು ಹೇಳಿದರು.
ರೋಟರಿ ಸಂಸ್ಥೆಯು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಗ್ರಾಮೀಣ ಮಕ್ಕಳೆಂಬ ಕೀಳರಿಮೆ ಬೇಡ. ಹಳ್ಳಿಗಾಡಿನಲ್ಲಿ ಓದಿದವರೇ ಅತ್ಯುನ್ನತ ಹುದ್ದೆ ಅಲಂಕರಿಸಿ ದೇಶವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಹೇಳಿದರು.
‘ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಿ. ಪೋಷಕರಿಗೆ ಹಾಗೂ ಸಮಾಜಕ್ಕೆ ಹೊರೆಯಾಗದೆ ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಿ. ಏಕಾಗ್ರತೆ ಮತ್ತು ಕಲಿಕಾಸಕ್ತಿ ಮೂಲಕ ಸಾಧನೆ ಮಾಡಿ. ಶಾಲೆ, ಗ್ರಾಮ, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತನ್ನಿ. ಪೋಷಕರ ಧಕ್ಕೆಯಾಗದಂತೆ ಶೈಕ್ಷಣಿಕ ಸಾಧನೆ ಮಾಡಿ’ ಎಂದು ಆಶಿಸಿದರು.
‘ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಈ ಹಂತದಲ್ಲಿ ಎಚ್ಚರ ತಪ್ಪಿದರೆ ಜೀವನವಿಡೀ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರೌಢ ಶಾಲಾ ಹಂತದಲ್ಲಿ ಪಡುವ ಶ್ರಮ ಮುಂದಿನ ಬದುಕಿನ ಸುಖಕ್ಕೆ ದಾರಿಯಾಗುತ್ತದೆ. ಪಠ್ಯದ ಜತೆಗೆ ಸಾಮಾಜಿಕ ಜ್ಞಾನ ವೃದ್ದಿಸಿಕೊಂಡು ಜೀವನದಲ್ಲಿ ಮುಂದೆ ಬನ್ನಿ’ ಎಂದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎಸ್.ಅನಂತಪದ್ಮನಾಭ್, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಸತೀಶ್ ಎಸ್.ನ್ಯಾಮತಿ, ಶ್ವೇತಾ, ಭವಾನಿ, ಸುಗುಣಾ, ಲೀಲಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ವಸಂತಮ್ಮ ಹಾಜರಿದ್ದರು.