ಕೋಲಾರ: ಹೈದರಾಬಾದಿನ ಪಶುವೈದ್ಯೆ ಡಾ.ಪ್ರಿಯಾಂಕರೆಡ್ಡಿ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ಮೆಕ್ಕೆ ವೃತ್ತದಲ್ಲಿ ಧರಣಿ ನಡೆಸಿದರು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಶೋಷಣೆ ಮರುಕಳುಹಿಸುತ್ತಿದ್ದರು ಸರ್ಕಾರಗಳು ಮೌನವಹಿಸುತ್ತಿವೆ’ ಎಂದು ಆಕ್ರೋಶವ್ಯಕ್ತಪಡಿಸಿದರು.
‘ದೆಹಲಿಯಲ್ಲಿನ ಡೆದ ಅತ್ಯಾಚಾರ ಪ್ರಕರಣದ ನೆನಪು ಮಾಸುವ ಮೊದಲೇ ಮತ್ತೊಂದು ಸಂಭವಿಸಿರುವುದು ಜನರಲ್ಲಿ ಭಯ ಉಟ್ಟಿಸಿದಂತಾಗಿದೆ. 35 ವರ್ಷದ ಮಹಿಳೆಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಶಂಕೆಯಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು’ ಎಂದು ಒತ್ತಾಯಿಸಿದರು.
‘ಅಸಹಾಯಕರಾಗಿದ್ದ ವೈದ್ಯೆಯನ್ನು ನೆರವು ನೀಡುವ ನೆಪದಲ್ಲಿ ಕೊಂದಿರುವುದು ಪೈಶಾಚಿಕ ಕೃತ್ಯ. ಹೆಣ್ಣು ಮಕ್ಕಳು, ಮಹಿಳೆಯರು ಸುರಕ್ಷಿತವಾಗಿ ಮನೆಗೆ ವಾಪಸಾಗುವ ಖಾತರಿಯೇ ಇಲ್ಲವಾಗಿದೆ. ಇಂತಹ ಪ್ರಕರಣಗಳು ಮರುಕಳುಹಿಸುತ್ತಿರುವುದು ನೋಡಿದರೆ ಮನೆಯಿಂದ ಇಚ್ಚೆಗೆ ಬರಬಾರದು ಎನಿಸುತ್ತಿದೆ’ ಎಂದು ಅತಂಕ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ‘ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದ್ದರೂ ರಾಜಕಾರಣಿಗಳಿಗೆ ನಾಚಿಕೆ ಇಲ್ಲದಂತಾಗಿದೆ. ಅಧಿಕಾರ ಹಣ ಆಸ್ತಿ ಮಾಡುವ ದಂಧೆಯಲ್ಲಿ ತೊಡಗಿ ಜನಸಾಮಾನ್ಯರನ್ನು ಮರೆತು ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು. ಧರಣಿಯ ನಂತರ ತಹಶೀಲ್ದಾರ್ ಶೋಭಿತಾ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ತಾಳ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ರಾಜು, ವೆಂಕಟೇಶಪ್ಪ, ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ಸುಪ್ರಿಂಚಲ, ಚಂಗಲರಾಯಪ್ಪ ಪಾಲ್ಗೊಂಡಿದ್ದರು.