ಕೋಲಾರ: ಆರ್ಯ ಈಡಿಗ ಸಮುದಾಯದ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾರ್ಥಿನಿಲಯಕ್ಕೆ ನಿವೇಶನ ಮಂಜೂರು ಮಾಡಬೇಕೆಂದು ಜಿಲ್ಲಾ ಆರ್ಯ ಈಡಿಗ ಜನಾಂಗದಕೌಶಲಾಭಿವೃದ್ಧಿಸಂಘದ ಸದಸ್ಯರು ಇಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹಾಗೂ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
‘ಆರ್ಯ ಈಡಿಗ ಸಮುದಾಯವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ವಿದ್ಯಾರ್ಥಿಗಳ ಅನುಕೂಲಕ್ಕೆ ವಿದ್ಯಾರ್ಥಿನಿಲಯ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ನಿವೇಶನ ಮಂಜೂರು ಮಾಡಿದರೆ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಮುದಾಯದ ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಉನ್ನತ ಹುದ್ದೆ ಅಲಂಕರಿಸಬೇಕು’ ಎಂದು ಸಂಘದ ಪ್ರಾದೇಶಿಕ ನಿರ್ದೇಶಕ ಮೈಸೂರು ನಾರಾಯಣಪ್ಪ ಹೇಳಿದರು.
‘ಜಿಲ್ಲೆಯಲ್ಲಿ ಆರ್ಯ ಈಡಿಗ ಸಂಘದ ಕೌಶಲಾಭಿವೃದ್ಧಿ ಸಂಘ ಸ್ಥಾಪನೆಯಾಗಿದೆ. ಜಿಲ್ಲೆಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಜಿಲ್ಲಾ ಸಂಘದ ಕಚೇರಿ ಸ್ಥಾಪಿಸಲು ಜಿಲ್ಲಾಡಳಿತವು ನಿವೇಶನ ಕೊಡಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಆರ್ಯ ಈಡಿಗ ಜನಾಂಗದ ಕೌಶಲಾಭಿವೃದ್ಧಿ ಸಂಘದ ಸದಸ್ಯರಾದ ರಮೇಶ್, ನಾರಾಯಣಪ್ಪ, ಸೀತಾರಾಮ, ಮುನಿರಾಜು, ಆದಿನಾರಾಯಣ, ವೆಂಕಟರಮಣ, ಗಂಗಾಧರ್, ಸಂಪಂಗಿರಾಮಯ್ಯ ಹಾಜರಿದ್ದರು.