ಕೋಲಾರ: ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಅತಿವೇಗದಿಂದ ಸಂಚರಿಸುವ 30ಕ್ಕೂ ಹೆಚ್ಚು ರೇಸ್ ಬೈಕ್ಗಳನ್ನು ತಡೆದ ಸಂಚಾರಿ ಠಾಣೆ ಪೊಲೀಸರು ಭಾನುವಾರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಸಂಚಾರಿ ಠಾಣೆ ಪಿಎಸ್ಐ ನವೀನ್ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ನಗರ ಹೊರವಲಯದ ಕೊಂಡರಾಜನಹಳ್ಳಿ ಸಮೀಪ ಸಂಚಾರಿ ಠಾಣೆ ಪೊಲೀಸರು ಬ್ಯಾರಿಕೇಡ್ಗಳನ್ನು ವಾಹನಗಳನ್ನು ತಡೆದರು.
ಪ್ರತಿ ಭಾನುವಾರ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ಗಳಲ್ಲಿ ಯುವಕರು ರೇಸ್ ತೆರಳಿದ್ದರು, ಅತಿ ವೇಗದಿಂದ ಸಂಚರಿಸುವ ಮೂಲಕ ಶಬ್ದ ಮಾಲಿನ್ಯದ ಜತೆಗೆ ರಸ್ತೆಯಲ್ಲಿ ಇತರೆ ವಾಹನಗಳ ಸಂಚಾರಕ್ಕೆ ಆತಂಕಕಾರಿ ವಾತಾವರಣಕ್ಕೆ ಸೃಷ್ಟಿಸುತ್ತಿದ್ದರು.
ದ್ವಿಚಕ್ರವಾಹನಗಳ ಶಬ್ದವೇ ಭಯಾನಕವಾಗಿದ್ದು, ವೇಗ ಸುಮಾರು ಗಂಟೆಗೆ 200 ಕಿಮೀಗೂ ಹೆಚ್ಚು ಹೋಗುವ ಸವಾರರಿಂದಾಗಿ ಇತರೆ ವಾಹನಗಳ ಸವಾರರು ಭಾನುವಾರದಂದು ಆತಂಕದಿಂದಲೇ ಹೆದ್ದಾರಿಯಲ್ಲಿ ಸಂಚರಿಸುವಂತಾಗಿತ್ತು.
ಇತ್ತೀಚಿಗೆ ಹೆದ್ದಾರಿಯಲ್ಲಿ ರೇಸ್ ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಸಂಚಾರಿ ಪೊಲೀಸರು ಭಾನುವಾರ ಕಾರ್ಯಾಚರಣೆ ನಡೆಸಿ 30ಕ್ಕೂ ಹೆಚ್ಚು ಬೈಕ್ಗಳನ್ನು ತಡೆದು ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.