ಮುಳಬಾಗಿಲು: ಬರಗಾಲದ ಪ್ರದೇಶಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲಾಗಿ ಸರ್ಕಾರ ಆಹಾರಧಾನ್ಯಗಳನ್ನು ವಿತರಿಸುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎ.ವಿ.ಶ್ರೀನಿವಾಸ್ ನುಡಿದರು.
ತಾಲ್ಲೂಕಿನ ತಾಯಲೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮತ್ತು ಸಿಟಿಜನ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಆಹಾರ ಸಾಮಾಗ್ರಿ ವಿತರಿಸಿ ಮಾತನಾಡಿದರು.
ಅಕ್ಕಿ ಅಥವಾ ಗೋಧಿ 5 ಕೆ.ಜಿ, 500 ಗ್ರಾಂ. ಅಡುಗೆ ಎಣ್ಣೆ, ಹಾಲಿನ ಪುಡಿ ವಿತರಿಸಲಾಯಿತು. ಎಲ್ಲ ವಿದ್ಯಾರ್ಥಿಗಳು ಆಹಾರ ಸಾಮಗ್ರಿಗಳನ್ನು ಸಕಾಲದಲ್ಲಿ ಪಡೆದು ಪ್ರತಿದಿನ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿ ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ ಜತೆ ಪೌಷ್ಟಿಕ ಆಹಾರ ಅತಿಮುಖ್ಯ. ಕೋವಿಡ್- 19 ವ್ಯಾಪಕವಾಗಿ ಹರಡುತ್ತಿರುವ ಕಾರಣ ಮಾಸ್ಕ್ ಧರಿಸಬೇಕು. ಯೋಗ, ಪ್ರಾಣಾಯಾಮ ಮಾಡಬೇಕು ಎಂದರು.
ಮಧ್ಯಾಹ್ನ ಉಪಾಹಾರ ಯೋಜನೆಯ ಸಹಾಯಕ ನಿರ್ದೇಶಕ ಆನಂದ್ ಮಾತನಾಡಿದರು. ಉಪಪ್ರಾಂಶುಪಾಲ ರಾದ ನಾರಾಯಣಮ್ಮ, ರೋಟರಿ ಸಂಸ್ಥೆಯ ಅರುಣ್, ಶಿಕ್ಷಣ ಸಂಯೋಜಕ ಸೊಣ್ಣಪ್ಪ ಭಾಗವಹಿಸಿದ್ದರು.