ಕೋಲಾರ: ‘ಜಾತಿ, ಭಾಷೆ, ಧರ್ಮ, ಪ್ರಾದೇಶಿಕತೆಯ ಭೇದ ಭಾವ ಹೊಗಲಾಡಿಸಲು ಮಕ್ಕಳಿಗೆ ಸದ್ಭಾವನೆ, ಸೌಹಾರ್ದತೆ, ಶಾಂತಿ, ರಾಷ್ಟ್ರೀಯ ಏಕತೆಯ ಮಹತ್ವ ತಿಳಿಸಿಕೊಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸಲಹೆ ನೀಡಿದರು.
ಇಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿ, ‘ವಿದ್ಯಾವಂತರಲ್ಲೇ ಮಾರಕವಾದ ಭೇದ ಭಾವದ ಮನೋಭಾವ ಹೆಚ್ಚುತ್ತಿದ್ದು, ಇದನ್ನು ತಪ್ಪಿಸಲು ಶಾಲಾ ಹಂತದಲ್ಲೇ ಮಕ್ಕಳಿಗೆ ನೈತಿಕ ಮತ್ತು ದೇಶ ಪ್ರೇಮದ ಶಿಕ್ಷಣ ನೀಡಬೇಕು’ ಎಂದರು.
‘ಸದ್ಭಾವನಾ ದಿನದ ಅಂಗವಾಗಿ ದೇಶದಲ್ಲಿ ರಾಷ್ಟ್ರೀಯ ಸೌಹಾರ್ದತೆಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸಬೇಕು. ಈ ದಿನದಂದು ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಮಕ್ಕಳಿಗೆ ಸೌಹಾರ್ದತೆಯ ಮಹತ್ವ ತಿಳಿಸುವ ಕೆಲಸ ಆಗಬೇಕು’ ಎಂದು ತಿಳಿಸಿದರು.
‘ಇತ್ತೀಚಿನ ವರ್ಷಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ವಿಚಾರವನ್ನು ಮಕ್ಕಳಿಗೆ ತಿಳಿಸಬೇಕು. ಸೇನೆಗೆ ಸೇರಿ ದೇಶ ಸೇವೆ ಮಾಡುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ದೇಶದ ಜನರ ಭಾವನಾತ್ಮಕ ಏಕತೆ ಮತ್ತು ಸಾಮರಸ್ಯಕ್ಕಾಗಿ ಪ್ರತಿಯೊಬ್ಬರು ಕೆಲಸ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು’ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್.ನಾಗರಾಜಗೌಡ, ಮಾಧವರೆಡ್ಡಿ, ಅಶೋಕ್, ಸಂಗಮೇಶ್, ರೇಣುಕಮ್ಮ ಹಾಜರಿದ್ದರು.