ವೇಮಗಲ್: ‘ದೇವರ ಕೃಪೆ, ಪ್ರೇರಣೆ ಇಲ್ಲದೆ ಮನುಷ್ಯನ ಜೀವನದಲ್ಲಿ ಏನೂ ನಡೆಯುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಅರಿಕೆರೆ ಮಂಜುನಾಥಗೌಡ ಅಭಿಪ್ರಾಯಪಟ್ಟರು.
ಹೋಬಳಿ ವ್ಯಾಪ್ತಿಯ ಸೀತಿ ಗ್ರಾಮದಲ್ಲಿ ಮಂಗಳವಾರ ನಡೆದ ಪತೇಶ್ವರಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ‘ಮನುಕುಲದ ವಿಕಸನಕ್ಕೆ ದೇವರ ಆಶೀರ್ವಾದ ಅಗತ್ಯ’ ಎಂದು ಹೇಳಿದರು.
‘ದೇವರೆಂಬ ಅಗೋಚರ ಶಕ್ತಿಯಿಂದ ನಾವು ಬದುಕುತ್ತಿದ್ದೇವೆ. ನಾವು ಸತ್ಸಂಗದಿಂದ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಜೀವನದಲ್ಲಿ ಮುಕ್ತಿ ಪಡೆಯಲು ದ್ವೇಷ, ಅಸೂಯೆ, ಕೋಪ ಬಿಡಬೇಕು. ಯಾರೂ ಜಾತಿಯಿಂದ ಬ್ರಾಹ್ಮಣರಾಗಲು ಸಾಧ್ಯವಿಲ್ಲ. ಆತ್ಮ ಪರಿಶುದ್ಧತೆ, ಆಚಾರ ವಿಚಾರಗಳಿಂದ ನಾವು ಸಹ ಸಂಸ್ಕಾರವಂತ ಬ್ರಾಹ್ಮಣರಾಗಲು ಸಾಧ್ಯ. ದಾರ್ಶನಿಕರ ತತ್ವಾದರ್ಶ ಪಾಲಿಸುವ ಮೂಲಕಜೀವನದ ಗುರಿ ಸಾಧಿಸಬೇಕು’ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ, ಗ್ರಾಮದ ಮುಖಂಡರಾದ ಮುನಿವೆಂಕಟೇಗೌಡ, ಕನಕರಾಜ್, ಗಜೇಂದ್ರ, ಚೌಡೇಗೌಡ, ನಾಗರಾಜ್, ನಾರಾಯಣಸ್ವಾಮಿ, ಪ್ರತಾಪ್, ಶಿವಣ್ಣ, ನಿವೃತ್ತ ಎಸ್ಐ ವೆಂಕಟಪ್ಪ ಉಪಸ್ಥಿತರಿಸಿದ್ದರು.