ಕೋಲಾರ: ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿನ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಗುರುಭವನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡರ ನೇತೃತ್ವದಲ್ಲಿ ಶನಿವಾರ ಸ್ವಚ್ಛಗೊಳಿಸಲಾಯಿತು.
ಮುಖ್ಯ ಶಿಕ್ಷಕರ ಸಭೆ, ಸಮಾರಂಭಕ್ಕಾಗಿ ನಿರ್ಮಿಸಿದ್ದ ಮುಖ್ಯ ಶಿಕ್ಷಕರ ಭವನವನ್ನು ಸುಮಾರು 10 ವರ್ಷಗಳಿಂದ ಬಂದ್ ಮಾಡಲಾಗಿತ್ತು. ಹೀಗಾಗಿ ಭವನದ ಆವರಣದಲ್ಲಿ ಮತ್ತು ಒಳಗೆ ಕಳೆ ಗಿಡಗಳು ಬೆಳೆದಿದ್ದವು. ಜಿಲ್ಲಾಧಿಕಾರಿ ಆದೇಶದಂತೆ ಸ್ವಚ್ಛ ಶನಿವಾರ ಆಚರಿಸುತ್ತಿರುವ ಶಿಕ್ಷಣ ಇಲಾಖೆಯು ಈ ಭವನದ ಸ್ವಚ್ಛತೆಗೆ ಮುನ್ನುಡಿ ಬರೆಯಿತು.
ಇಲಾಖೆ ಸಿಬ್ಬಂದಿಯು ಭವನದಲ್ಲಿನ ಕಳೆ ಗಿಡಗಳನ್ನು ತೆರವುಗೊಳಿಸಿದರು. ಅಲ್ಲದೇ, ಭವನದೊಳಗಿದ್ದ ನಿರುಪಯುಕ್ತ ಹಳೇ ಸಾಮಾನುಗಳನ್ನು ಹೊರಗೆ ಹಾಕಿ ಸ್ವಚ್ಛಗೊಳಿಸಿದರು. ಮುಖ್ಯ ಶಿಕ್ಷಕರು, ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಭವನದಲ್ಲಿನ ದೂಳು ಗುಡಿಸಿದರು. ಬಳಿಕ ಭವನವನ್ನು ನೀರಿನಿಂದ ತೊಳೆಯಲಾಯಿತು.
ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಮುಖ್ಯ ಶಿಕ್ಷಕರಾದ ಸಿ.ಎನ್.ಪ್ರದೀಪ್ಮಾರ್, ಚಂದ್ರಪ್ಪ, ಮಹದೇವನಾಯಕ್, ಗಾಯತ್ರಿದೇವಿ, ಶಂಕರೇಗೌಡ, ರವಿ, ಸುನಂದಮ್ಮ, ರಾಧಾಮಣಿ, ದಾಸಪ್ಪ ಹಾಜರಿದ್ದರು.