ಕೆಜಿಎಫ್: ಕುಡಿದ ಮತ್ತಿನಲ್ಲಿ ಪತಿ ಹೆಂಡತಿಗೆ ಕಬ್ಬಿಣದ ಸರಪಳಿ ಹಾಕಿ ಕುರ್ಚಿಗೆ ಕಟ್ಟಿಹಾಕಿದ ಅಮಾನವೀಯ ಘಟನೆ ಗುರುವಾರ ನಗರದ ಹೊರವಲಯದ ನಾಚಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಸಂಜೆ ವೇಳೆಗೆ ಮನೆಯಿಂದ ಕಬ್ಬಿಣದ ಸರಪಳಿಯೊಂದಿಗೆ ಹೊರಗೆ ಬಂದ ಮಹಿಳೆ ಚಂದ್ರಮ್ಮ, ಸಹಾಯಕ್ಕಾಗಿ ಮೊರೆ ಇಟ್ಟರು. ಗಾಬರಿಗೊಂಡ ಸಾರ್ವಜನಿಕರು ಕೂಡಲೇ ರಾಬರ್ಟ್ಸನ್ಪೇಟೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
ಚಂದ್ರಮ್ಮ ಆಂಧ್ರಪ್ರದೇಶದ ವಿ.ಕೋಟೆಯವರು. ಒಂದೂವರೆ ವರ್ಷದ ಹಿಂದೆ ವೆಲ್ಡಿಂಗ್ ವೃತ್ತಿ ಮಾಡುತ್ತಿರುವ ಜಯರಾಮ ಎಂಬುವರನ್ನು ಮದುವೆಯಾಗಿದ್ದರು. ಸದಾ ಕುಡಿದು ಬರುತ್ತಿದ್ದ ಜಯರಾಮ, ಹೆಂಡತಿಯನ್ನು ಥಳಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗುರುವಾರವೂ ಕುಡಿದು ಬಂದಿದ್ದ ಪತಿ ಹೆಂಡತಿಗೆ ಸರಪಳಿ ತೊಡಿಸಿ ಹಿಂಸೆ ನೀಡಲು ಆರಂಭಿಸಿದರು. ಆಗ ಪತಿಯ ಕಣ್ಣಿಗೆ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಂದ್ರಮ್ಮ ತಪ್ಪಿಸಿಕೊಂಡು ಹೊರ ಬಂದರು.
ರಾಬರ್ಟ್ ಸನ್ಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ಯನ್ನು ಅವಲೋಕಿಸಿದರು. ಚಂದ್ರಮ್ಮ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.