ಮಾಲೂರು: ‘ತಾಲ್ಲೂಕು ಆಡಳಿತ ಹದಗೆಟ್ಟಿದ್ದು, ರೈತರ ಜಮೀನಿನ ದಾಖಲೆಗಳು ಅನ್ಯರಿಗೆ ಪರಭಾರೆಯಾಗಿರುವ ಸಂದೇಹ ಹೆಚ್ಚಾಗಿದೆ’ ಎಂದು ಜೆಡಿಎಸ್ ಅಭ್ಯರ್ಥಿ ಜಿ.ಇ. ರಾಮೇಗೌಡ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ತಾಲ್ಲೂಕು ಜೆಡಿಎಸ್ ಘಟಕದಿಂದ ಹಮ್ಮಿಕೊಂಡಿದ್ದ ಪಕ್ಷದ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿಯಲ್ಲಿ ರೈತರು ಸೇರಿದಂತೆ ನಾಗರಿಕರ ಜಮೀನಿನ ದಾಖಲಾತಿಗಳನ್ನು ಮಧ್ಯವರ್ತಿಗಳು ಅಧಿಕಾರಿಗಳ ಜೊತೆ ಸೇರಿ ಮಾಯ ಮಾಡುತ್ತಿದ್ದಾರೆ. ರೈತರು ತಮ್ಮ ಜಮೀನಿನ ದಾಖಲಾತಿಗಳು ಸಿಗದೆ ಪ್ರತಿದಿನ ಕಚೇರಿ ಸುತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ತಾಲ್ಲೂಕು ಆಡಳಿತದಲ್ಲಿ ಕಾಸು ಇಲ್ಲದೇ ಯಾವುದೇ ಕಡತ ಮುಂದೆ ಸಾಗುವುದಿಲ್ಲ. ಇನ್ನು ತಾಲ್ಲೂಕಿನ ಜನತೆಯ ಆರೋಗ್ಯದ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆಯಿಂದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯುತಿದ್ದಾರೆ. ಬಡ ರೋಗಿಗಳು ಹಣದ ಕೊರತೆಯಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.