ಜಂಗಲಾ (ಛತ್ತೀಸಗಡ): ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಲಿತರು, ಹಿಂದುಳಿದ ವರ್ಗದವರಿಗೆ ನೀಡಿದ ಹಕ್ಕುಗಳ ರಕ್ಷಣೆ ಹೊಣೆ ಸರ್ಕಾರದ್ದು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯ ಮೊದಲ ಹಂತ ಉದ್ಘಾಟಿಸಿದ ವೇಳೆ ಅವರು ಮಾತನಾಡಿದರು.
‘ದಲಿತರು, ಹಿಂದುಳಿದ ವರ್ಗದವರ ಹಕ್ಕುಗಳ ರಕ್ಷಣೆಗಾಗಿ ಶಸ್ತ್ರಾಸ್ತ್ರ ಕೈಗೆತ್ತಿಕೊಂಡು ಜೀವನ ಹಾಳುಮಾಡಿಕೊಳ್ಳಬೇಕಿಲ್ಲ’ ಎಂದು ಅವರು ಸಲಹೆ ಮಾಡಿದ್ದಾರೆ.
‘ಮಕ್ಕಳ ಜೀವವನ್ನು ನಕ್ಸಲೀಯರಿಗೆ ಒಪ್ಪಿಸಬೇಡಿ. ಅವರು ಸ್ಥಳೀಯರನ್ನು ಸಾವಿಗೆ ನೂಕಿ ತಾವು ಸುರಕ್ಷಿತವಾಗಿರುತ್ತಾರೆ’ ಎಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ.
‘ಬಿಜೆಪಿಯಿಂದ ಅಂಬೇಡ್ಕರ್ ಪರಂಪರೆ ನಾಶ’
ನವದೆಹಲಿ: ಅಂಬೇಡ್ಕರ್ ಪರಂಪರೆಯನ್ನು ಬಿಜೆಪಿ ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮಾತಿನ ಮೂಲಕ ಅಂಬೇಡ್ಕರ್ಗೆ ನಮನ ಸಲ್ಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸೆಲ್ಜಾ ಕುಮಾರಿ ಆರೋಪಿಸಿದ್ದಾರೆ.
‘ಬಿಜೆಪಿ ಮತ್ತು ಆರ್ಎಸ್ಎಸ್ ದಲಿತ ವಿರೋಧಿ ಧೋರಣೆ ಹೊಂದಿವೆ. ಹಾಗಾಗಿಯೆ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆಯನ್ನು ದುರ್ಬಲಗೊಳಿಸಿದೆ. ಮೀಸಲಾತಿ ರದ್ದುಪಡಿಸಲು ಹಾಗೂ ಸಂವಿಧಾನ ತಿದ್ದುಪಡಿ ಮಾಡಲು ಮುಂದಾಗಿದೆ’ ಎಂದು ಅವರು ಆರೋಪಿಸಿದ್ದಾರೆ.