ಕೋಲಾರ: ಎಪಿಎಂಸಿ ಮಾರುಕಟ್ಟೆಯನ್ನು ವಿಸ್ತರಣೆ ಮಾಡಬೇಕು ಹಾಗೂ ಮಾರುಕಟ್ಟೆಗೆ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ನಗರದ ಎಪಿಎಂಸಿ ಕಚೇರಿ ಎದುರು ಗುರುವಾರ ಧರಣಿ ನಡೆಸಿ, ಅಧ್ಯಕ್ಷ ಡಿ.ಎಲ್.ನಾಗರಾಜ್ಗೆ ಮನವಿ ಸಲ್ಲಿಸಿದರು.
‘ನಗರದ ಎಪಿಎಂಸಿಯು ದೇಶದ ಗಮನ ಸೆಳೆದಿದೆ. ಅಕ್ಕಪಕ್ಕದ ರಾಜ್ಯಗಳು ರೈತರು ಇಲ್ಲಿಗೆ ಟೊಮೆಟೊ ಸೇರಿದಂತೆ ತರಕಾರಿ ತಂದು ಮಾರುತ್ತಿದ್ದಾರೆ. ಪ್ರತಿನಿತ್ಯ ಲಕ್ಷಗಟ್ಟಲೆ ವ್ಯವಹಾರ ನಡೆಯುತ್ತದೆ. ಆದರೆ, ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲ, ಶೌಚಾಲಯ ವ್ಯವಸ್ಥೆ ಮತ್ತು ವಿಶ್ರಾಂತಿ ಭವನವಿಲ್ಲ. ಇದರಿಂದ ಕಾರ್ಮಿಕರು ಮತ್ತು ರೈತರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ' ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
‘ಟೊಮೆಟೊ ಉತ್ಪಾದನೆಯಲ್ಲಿ ಜಿಲ್ಲೆ ತನ್ನದೆ ಆದ ಸ್ಥಾನಮಾನ ಪಡೆದುಕೊಂಡಿದ್ದು, ಮಾರುಕಟ್ಟೆ ವಿಸ್ತರಣೆ ಮಾಡಬೇಕು. ಇಲ್ಲಿ ಬೆಳೆದಿರುವ ತರಕಾರಿ ವಿದೇಶಕ್ಕೂ ರಫ್ತಾಗುತ್ತಿದೆ. ಆದರೆ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಇಲ್ಲಿನ ಮಂಡಿ ಮಾಲೀಕರೇ ಟೊಮೆಟೊ ತರಿಸಿ ಮಾರಾಟ ಮಾಡುವ ಮೂಲಕ ಇಲ್ಲಿನ ರೈತರನ್ನು ವಂಚಿಸುತ್ತಿದ್ದಾರೆ' ಎಂದು ದೂರಿದರು.
‘ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇರುವ ಅಧಿಕಾರಿಗಳಿಗೆ ಬೇರೆ ಬೇರೆ ಕೆಲಸಗಳ ಒತ್ತಡದ ಜತೆಗೆ ಮಾನಸಿಕ ಕೆಲಸ ನಿರ್ವಹಿಸದೇ ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ' ಎಂದು ಎಂದರು.
‘ನೀರಿಲ್ಲದೆ ಸಾಕಷ್ಟು ರೈತರು ಜಿಲ್ಲೆಯಿಂದ ವಲಸೆ ಹೋಗುತ್ತಿದ್ದಾರೆ. ಲಭ್ಯವಿರುವ ಅಲ್ಪ ನೀರಿನಿಂದ ತರಕಾರಿ ಬೆಳೆದು ಮಾರುಕಟ್ಟೆಗೆ ತಂದರೆ ನಿಗಧಿತ ಬೆಲೆ ದೊರೆಯುತ್ತಿಲ್ಲ. ಇಲ್ಲಿ ಕಮಿಷನ್ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುವುದಿಲ್ಲ' ಎಂದು ಆರೋಪಿಸಿದರು.
`ಸಾಲ ಮಾಡಿ ಟೊಮೆಟೊ ಬೆಳೆದು ಮಾರುಕಟ್ಟರೆಗೆ ಬಂದರೆ ಬೆಲೆ ದೊರೆಯುವುದಿಲ್ಲ. ಇಲ್ಲಿ ಸ್ಥಳೀಯ ಟೊಮೆಟೊಗಿಂತ ಹೊರ ರಾಜ್ಯದ ಟೊಮೆಟೊಗೆ ಬೆಲೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ತರಿಸುವ ಮಂಡಿ ಮಾಲೀಕರಿಗೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ಟೊಮೆಟೊ ಸೀಸನ್ ಮುಂದಿನ ತಿಂಗಳಿಂದ ಆರಂಭವಾಗಲಿದ್ದು ಜಾಗ ಸಮಸ್ಯೆಯಿದೆ. ರೈತರು ರಸ್ತೆಯಲ್ಲಿಟ್ಟು ಟೊಮೆಟೊ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ವಾಹನ ಸಂಚಾರಕ್ಕೂ ಅಡ್ಡಿ ಅಗುತ್ತಿದೆ' ಎಂದು ವಿವಿವರಿಸಿದರು.
ಪ್ರತಿಭಟನಾಕಾರರದಿಂದ ಮನವಿ ಸ್ವೀಕರಿಸಿ ಮಾತನಾಡಿ ಎಪಿಎಂಸಿ ಅಧ್ಯಕ್ಷ ಡಿ.ಎಸ್.ನಾಗರಾಜ್, ಮಾರುಕಟ್ಟೆಯನ್ನು ವಿಸ್ತರಿಸಲು ತಾಲ್ಲೂಕಿನ ಮಂಗಸಂದ್ರದ ಬಳಿ ಜಾಗ29 ಎಕರೆ ಜಾಗ ಗುರುತಿಸಲಾಗಿದೆ. ಅರಣ್ಯ ಇಲಾಖೆಯಿಂದ ಒಪ್ಪಿಗೆ ಪತ್ರ ಸಿಕ್ಕ ಕೂಡಲೇ ಜಿಲ್ಲಾಧಿಕಾರಿಗಳು ಮಂಜೂರು ಮಾಡಿಸಲು ಸಿದ್ದರಿದ್ದಾರೆ. ಮಾರುಕಟ್ಟೆಗೆ ಬರುವ ರೈತರಿಗೆ ಸೌಕರ್ಯ ಕಲ್ಪಿಸಲಾಗಿದ್ದು, ಸ್ವಚ್ಛತೆ ಮಾಡಲು ಟಂಡರ್ ಕರೆಯಲಾಗಿದೆ' ಎಂದು ಹೇಳಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಕೃಷ್ಣೇಗೌಡ, ನಾಗೇಶ್, ರವಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.