ಕೋಲಾರ: ಬೆಂಗಳೂರಿನ ಸ್ವೀಕಾರ ಕೇಂದ್ರದಲ್ಲಿ ಅವ್ಯವಹಾರ ನಡೆಸಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಕೃಷಿ ದಹಿಸಿ ಧರಣಿ ನಡೆಸಿದರು.
ಸಂಘದ ಮಹಿಳಾ ಘಟಕದ ಅಧ್ಯಕ್ಷ ಎ.ನಳಿನಿ ಮಾತನಾಡಿ, ‘ಸ್ವೀಕಾರ ಕೇಂದ್ರವು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದ್ದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರವು ಅನಾಚಾರಗಳ ತಾಣವಾಗಿದ್ದು ನಿರಾಶ್ರಿತ ಅಬಲೆಯರ ಶೋಷಣೆ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಕೇಂದ್ರದಲ್ಲಿ ಪ್ರವೇಶ ಪಡೆದ ಅಬಲೆಯರು ಈಗಾಗಲೇ ಸುಮಾರು ಮಂದಿ ನಾಪತ್ತೆಯಾಗಿದ್ದಾರೆ. ಬಹಳಷ್ಟು ಅಬಲೆಯರ ಮೇಲೆ ಇಲಾಖೆಯ ಕೆಲ ಸಿಬ್ಬಂದಿ ಅತ್ಯಾಚಾರ ಎಸಗಿರುವ ಪ್ರಕರಣಗಳು ಬೆಳೆಕಿಗೆ ಬಂದಿದೆ. ಆಶ್ರಯ ಅರಸಿ ಕೇಂದ್ರಕ್ಕೆ ಬರುವ ಹಲವಾರು ಹೆಣ್ಣು ಮಕ್ಕಳನ್ನು ಅಧಿಕಾರಿಗಳೇ ರಾತ್ರೋರಾತ್ರಿ ನಾಪಾತ್ತೆ ಮಾಡಿದ್ದಾರೆ’ ಎಂದು ದೂರಿದರು.
‘ಅಮಾಯಕ ಹೆಣ್ಣು ಮಕ್ಕಳನ್ನು ಹೊರರಾಜ್ಯದ ವೇಶ್ಯಾವಾಟಿಕೆ ಸ್ಥಳಗಳಿಗೆ ರವಾನಿಸಲ್ಪಟ್ಟಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ. ಸ್ವೀಕಾರ ಕೇಂದ್ರದಿಂದ ನಾಪತ್ತೆಯಾಗಿರುವ ಹೆಣ್ಣು ಮಕ್ಕಳು ಪೈಕಿ ಕೆಲವರಷ್ಟೇ ಮನೆಗಳಿಗೆ ವಾಪಸ್ಸು ಬಂದಿದ್ದಾರೆ. ಉಳಿದವರು ಎಲ್ಲಿದ್ದಾರೆ ಎನ್ನುವುದು ಇಲ್ಲೆಯವರೆಗೂ ಸುಳಿವಿಲ್ಲ. ಅಧಿಕಾರಿಗಳನ್ನು ಕೇಳಿದರೆ ಮೌನವಾಗಿದ್ದಾರೆ. ಕೇಂದ್ರದ ಸಿಬ್ಬಂದಿಗಳಾದ ಬಿ.ವಾಸಂತಿ, ಸಿ.ದಾಕ್ಷಾಯಿಣಿ ಹಾಗೂ ಕನ್ನಿಗ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಪಡಿಸಬೇಕು’ ಎಂದು ಒತ್ತಾಯಿಸಿದರು.
‘ಮಹಿಳಾ ಮತ್ತು ಮಕ್ಕಳ ನಿರಾಶ್ರಿತ ಕೇಂದ್ರಗಳಲ್ಲಿ ನಾಪತ್ತೆಯಾಗಿರುವ ಮಕ್ಕಳು ಮತ್ತು ಮಹಿಳೆಯರನ್ನು ಪತ್ತೆ ಹಚ್ಚಬೇಕು. ಈ ನಿರಾಶ್ರೀತ ಕೇಂದ್ರಗಳಿಗೆ ಬರುವ ಲಕ್ಷಾಂತರ ಅನುದಾನವನ್ನು ದುರ್ಬಳಕೆಯಾಗಿದ್ದು ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.