ಜಮ್ಮು: ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿದ್ದ ಆರೋಪ ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಬಿಜೆಪಿ ಸಚಿವರು ರಾಜೀನಾಮೆ ನೀಡಿದ್ದಾರೆ.
ಸಚಿವರ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಹಸ್ತಾಂತರಿಸಲಿದ್ದಾರೆ ಎಂದು ಬಿಜೆಪಿಯ ರಾಜ್ಯ ಘಟಕದ ಉಸ್ತುವಾರಿ ರಾಮ್ ಮಾಧವ್ ತಿಳಿಸಿದ್ದಾರೆ.
ಅರಣ್ಯ ಸಚಿವ ಲಾಲ್ ಸಿಂಗ್ ಮತ್ತು ಕೈಗಾರಿಕಾ ಸಚಿವ ಚಂದ್ರ ಪ್ರಕಾಶ್ ಗಂಗಾ ರಾಜೀನಾಮೆ ನೀಡಿದವರು.
ಅತ್ಯಾಚಾರ ಆರೋಪಿಯ ಬಂಧನ ವಿರೋಧಿಸಿ ‘ಹಿಂದೂ ಏಕತಾ ಮಂಚ್’ ಎಂಬ ಸಂಘಟನೆ ರ್ಯಾಲಿ ನಡೆಸಿತ್ತು. ಇದಕ್ಕೆ ಉಭಯ ಸಚಿವರು ಬೆಂಬಲ ಸೂಚಿಸಿದ್ದರು. ರ್ಯಾಲಿಯಲ್ಲಿ ತ್ರಿವರ್ಣ ಧ್ವಜವನ್ನೂ ಬಳಸಲಾಗಿತ್ತು. ಆದರೆ, ಇದೀಗ ‘ಹಿಂದೂ ಏಕತಾ ಮಂಚ್’ನಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.
‘ಹಿಂದೂ ಏಕತಾ ಮಂಚ್’ ನಡೆಸಿದ್ದ ರ್ಯಾಲಿಗೆ ಮುಖ್ಯಮಂತ್ರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದರು.