ಬೆಂಗಳೂರು: ದಿಡ್ಡಳ್ಳಿಯ ಗಿರಿಜನರು ಮತ್ತು ಆದಿವಾಸಿಗಳಿಗೆ ನೆಲೆ ಕಲ್ಪಿಸಲು ನಡೆದ ಹೋರಾಟಕ್ಕೂ ನಕ್ಸಲ್ ಚಟುವಟಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಚೇತನ್ ಹೇಳಿದರು.
ಇದು ನಕ್ಸಲ್ ಪ್ರೇರಿತ ಹೋರಾಟ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ. ಆರ್ ಸೀತಾರಾಂ ಹೇಳಿಕೆ ಆಧರಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿರುವ ಆರೋಪ ಪಟ್ಟಿಯಲ್ಲಿ ಹೇಳಿದೆ. ಇದು ಶುದ್ಧ ಸುಳ್ಳು. ನನ್ನ ತೇಜೋವಧೆ ಮಾಡಲು ಹೂಡಿರುವ ತಂತ್ರ ಇದಾಗಿದೆ ಎಂದು ದೂರಿದರು.
ಇಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದ್ಧವಾಗಿ, ಗಾಂಧಿ, ಅಂಬೇಡ್ಕರ್ ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿ ಈ ಹೋರಾಟ ನಡೆದಿದೆ. ಹೋರಾಟದ ಫಲವಾಗಿ 528 ಆದಿವಾಸಿ ಕುಟುಂಬಗಳಿಗೆ ನೆಲೆ ಸಿಕ್ಕಿದೆ. ಇಲ್ಲ ಸಲ್ಲದ ಆರೋಪಗಳಿಂದ ತೀವ್ರವಾಗಿ ನೊಂದಿದ್ದೇನೆ ಎಂದರು.
ಆರೋಪಪಟ್ಟಿಯಲ್ಲಿ ಮಾಡಿರುವ ದೂರುಗಳನ್ನು ಬಿಜೆಪಿ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ನುಡಿದರು.