ಕೋಲಾರ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ತಾಲ್ಲೂಕಿನ ಷಾಪೂರು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಗುರುವಾರ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಓದುವ ಬೆಳಕು ಯೋಜನೆ ಮತ್ತು ಸದಸ್ಯತ್ವ ಅಭಿಯಾನಕ್ಕೆ ಗ್ರಾ.ಪಂ ಆಡಳಿತಾಧಿಕಾರಿ ರಾಜೇಂದ್ರಪ್ರಸಾದ್ ಚಾಲನೆ ನೀಡಿದರು.
‘ಗ್ರಂಥಾಲಯ ದೇವಾಲಯವಿದ್ದಂತೆ. ಇಲ್ಲಿ ಸರಸ್ವತಿ ನೆಲಸಿರುತ್ತಾಳೆ. ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ ಪಡೆಯಬಹುದು. ಕೆಟ್ಟ ಪುಸ್ತಕ ಎಂಬುದೇ ಇಲ್ಲ. ಪ್ರತಿ ಪುಸ್ತಕದಿಂದಲೂ ಒಂದಷ್ಟು ಜ್ಞಾನ ಪಡೆದುಕೊಳ್ಳಬಹುದು’ ಎಂದು ರಾಜೇಂದ್ರಪ್ರಸಾದ್ ಹೇಳಿದರು.
‘ತಪ್ಪು ಮಾಡದಂತೆ ತಡೆಯುವ ಶಕ್ತಿ ಸಾಹಿತ್ಯ ಮತ್ತು ಬರಹಕ್ಕೆ ಇದೆ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನ ವೃದ್ಧಿಯಾಗುತ್ತದೆ. ಆಧುನಿಕ ಕಾಲದಲ್ಲಿ ಪುಸ್ತಕ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ಡಿಜಿಟಲ್ ಗ್ರಂಥಾಲಯ ಸೇವೆ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.
ತಾ.ಪಂ ಸದಸ್ಯ ಆರ್.ಕೃಷ್ಣೇಗೌಡ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹರೀಶ್ಕುಮಾರ್, ಗ್ರಂಥಾಲಯ ಮೇಲ್ವಿಚಾರಕ ವೈ.ಆರ್.ಜಗದೀಶ್, ಶಿಕ್ಷಕರಾದ ಸುಬ್ರಹ್ಮಣ್ಯ, ರವಿಕುಮಾರ್ ಪಾಲ್ಗೊಂಡರು.