ಶ್ರೀನಿವಾಸಪುರ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದೂವರೆ ವರ್ಷ ಹಿಂದಿನ ಠಾಣೆಯಲ್ಲಿಯ ಮದ್ಯದ ಪಾರ್ಟಿ ವಿಡಿಯೊ ಈಗ ಮೂವರು ಪೊಲೀಸರ ತಲೆದಂಡಕ್ಕೆ ಕಾರಣವಾಗಿದೆ.
ಕಾನ್ಸ್ಟೆಬಲ್ಗಳಾದ ಚಲಪತಿ, ರಮೇಶ್ ಬಾಬು, ಮಂಜುನಾಥ್ ತಾಲ್ಲೂಕಿನ ಗೌನಿಪಲ್ಲಿ ಠಾಣೆಯಲ್ಲೇ ಮದ್ಯ ಸೇವಿಸುತ್ತಿರುವುದು ವಿಡಿಯೊದಲ್ಲಿದೆ. ಈ ಮೂವರನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಸೋಮವಾರ ಅಮಾನತುಗೊಳಿಸಿದ್ದಾರೆ.
ಠಾಣೆಯಲ್ಲಿ ಮಾಂಸದೂಟದ ಜೊತೆ ಮದ್ಯ ಸೇವಿಸುತ್ತಾ ಈ ಮೂವರು ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರವಾಗಿ ವ್ಯಕ್ತಿಯೊಬ್ಬರೊಂದಿಗೆ ಮೊಬೈಲ್ನಲ್ಲಿ ತೆಲುಗಿನಲ್ಲಿ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
‘ಈ ವಿಡಿಯೊ ಬಹಳ ಹಳೆಯದ್ದು. ಸುಮಾರು ಒಂದೂವರೆ ವರ್ಷದ ಹಿಂದೆ ನಡೆದ ಘಟನೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆಗಸಬ್ ಇನ್ಸ್ಪೆಕ್ಟರ್ ಹುದ್ದೆ ಖಾಲಿ ಇತ್ತು. ಮೂವರನ್ನು ಅಮಾನತು ಮಾಡಿದ್ದು, ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.