ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲ, ವೈದ್ಯ, ಉದ್ಯಮಿ ಸ್ಪರ್ಧೆಯಲ್ಲಿ

ಕುಟುಂಬ ರಾಜಕಾರಣಕ್ಕೆ ಹೆಸರಾದ ಹನೂರು ಕ್ಷೇತ್ರ
Last Updated 8 ಮೇ 2018, 9:43 IST
ಅಕ್ಷರ ಗಾತ್ರ

ಹನೂರು: ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ದಶಕಗಳಿಂದ ಸ್ಪರ್ಧೆಯಲ್ಲಿರುವ ಎರಡು ಕುಟುಂಬಗಳ ಸದಸ್ಯರೇ ಮತ್ತೆ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ. ಹಾಲಿ ಶಾಸಕ ಆರ್.ನರೇಂದ್ರ ವಕೀಲರಾದರೆ, ಬಿಜೆಪಿಯ ಪ್ರೀತನ್ ವೈದ್ಯರು. ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಉದ್ಯಮಿ. ತ್ರಿಕೋನ ಸ್ಪರ್ಧೆಯ ಕ್ಷೇತ್ರದ ಅಭ್ಯರ್ಥಿಗಳ ಹಿನ್ನೆಲೆ ಮತದಾರರಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಎಲ್‌ಎಲ್‌ಬಿ ವ್ಯಾಸಂಗ ಪೂರೈಸಿ ವೃತ್ತಿಯಲ್ಲಿ ವಕೀಲರಾಗಿದ್ದ ಶಾಸಕ ಆರ್‌.ನರೇಂದ್ರ ಅವರು ತಮ್ಮ ತಂದೆ ಜಿ.ರಾಜೂಗೌಡ ಅವರ ಅಕಾಲಿಕ ಮರಣದ ನಂತರ ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದವರು. ಇವರ ಎದುರಾಳಿ ಡಾ.ಪ್ರೀತನ್‌ನಾಗಪ್ಪ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು ಇದೇ ಮೊದಲ ಬಾರಿಗೆ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಉತ್ಸುಕರಾಗಿದ್ದಾರೆ.

ಆರ್‌.ಮಂಜುನಾಥ್‌ ಉದ್ಯಮಿ ಯಾಗಿದ್ದು ಇವರು ಸಹ ಹನೂರು ವಿಧಾನ ಸಭಾ ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಆರ್‌. ನರೇಂದ್ರ: ರಾಜಕೀಯ ಹಿನ್ನೆಲೆಯಿಂದ ಬಂದಿರುವ ಆರ್‌.ನರೇಂದ್ರ ತ‌ಮ್ಮ ತಂದೆ ಜಿ.ರಾಜೂಗೌಡ ಅವರ ಅಕಾಲಿಕ ನಿಧನದ ಬಳಿಕ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದವರು. ತಾವು ಎದುರಿಸಿರುವ ಮೂರು ಚುನಾವಣೆ ಪೈಕಿ ಒಂದರಲ್ಲಿ ಪರಾಭವಗೊಂಡು ಎರಡಲ್ಲಿ ಗೆಲುವು ಕಂಡಿದ್ದಾರೆ. 2004ರಲ್ಲಿ ಸಚಿವರಾಗಿದ್ದ ಜಿ. ರಾಜೂಗೌಡ ಅವರು ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಇವರು ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಳಿಕ ನಡೆದ 2008 ಹಾಗೂ 2013ರಲ್ಲಿ ನಡೆದ ಎರಡು ಸಾರ್ವತ್ರಿಕ ಚುನಾವಣೆಯಲ್ಲೂ ಗೆದ್ದು ಶಾಸಕರಾಗಿರುವ ಇವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದ್ದಾರೆ.

ಇವರ ದೊಡ್ಡಪ್ಪ ಜಿ.ವೆಂಕಟೆಗೌಡ ಅವರು ಹನೂರು ವಿಧಾನ ಸಭಾ ಕ್ಷೇತ್ರ ರಚನೆಯಾದ ಬಳಿಕ ಜರುಗಿದ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ಇವರ ಬಳಿಕ ಜಿ.ರಾಜೂಗೌಡ ಅವರು ಸಹ ನಾಲ್ಕು ಬಾರಿ ಗೆದ್ದು ಸಚಿವ ಸ್ಥಾನವನ್ನು ಅಲಂಕರಿಸಿದ್ದರು. ಹೀಗೆ, ರಾಜಕೀಯ ಹಿನ್ನಲೆ ಹೊಂದಿರುವ ನರೇಂದ್ರ ಅವರು ಎರಡು ಬಾರಿ ಗೆಲುವು ಸಾಧಿಸಿ ಹೈಟ್ರಿಕ್ ಹೊಸ್ತಿಲಲ್ಲಿದ್ದಾರೆ.

ಡಾ. ಪ್ರೀತನ್ ನಾಗಪ್ಪ: ಇವರು ಸಹ ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿರುವ ಇವರ ರಾಜಕಾರಣ ಪ್ರವೇಶವೂ ಆಕಸ್ಮಿಕ. ಇವರ ವೃತ್ತಿಯಲ್ಲಿ ವೈದ್ಯರಾಗಿದ್ದು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಗ್ಯಾಸ್ಟ್ರಾಂತಾಲಜಿ ವಿಶೇಷ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ತಂದೆ ಎಚ್.ನಾಗಪ್ಪ 1967 ಹಾಗೂ 94ರ ಚುನಾವಣೆಯಲ್ಲಿ ಜಯಗಳಿಸಿ ಸಚಿವರಾಗಿದ್ದರು.

2004ರಲ್ಲಿ ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿ ಆತನಿಂದ ಹತ್ಯೆಗೊಳಗಾದಾಗ ತಾಯಿ ಪರಿಮಳಾ ನಾಗಪ್ಪ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಜರುಗಿದ ಎರಡು ಚುನಾವಣೆಯಲ್ಲೂ ಪರಿಮಳಾ ನಾಗಪ್ಪ ಅವರು ಪರಾಭವಗೊಂಡರು. ಈ ಬಾರಿ ತಮ್ಮ ಪುತ್ರನಿಗೆ ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ಪುತ್ರನ ರಾಜಕೀಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಪ್ರೀತನ್‌ನಾಗಪ್ಪ ಅವರಿಗೆ ರಾಜಕಾರಣ ಎಂಬುದು ಹೊಸತೇನಲ್ಲ. ತಂದೆ ಕಾಲದಿಂದಲೂ ಚುನಾವಣೆ ಬಗ್ಗೆ ಜ್ಞಾನ ಹೊಂದಿದ್ದ ಇವರು ತಾಯಿ ಸ್ಪರ್ಧಿಸಿದ್ದ ಮೂರು ಚುನಾವಣೆಯಲ್ಲೂ ತಾಯಿ ಪರ ಕ್ಷೇತ್ರದಾದ್ಯಂತ ಪ್ರಚಾರ ಮಾಡಿದ್ದಾರೆ. ಪರಿಣಾಮ ಕ್ಷೇತ್ರ ಹೆಚ್ಚು ಪರಿಚಿತವಾಗಿದೆ. ಕ್ಷೇತ್ರದ ಜನತೆ ಇಂದಿಗೂ ಇವರನ್ನು ನಾಗಪ್ಪ ಅವರ ಕುಡಿ ಎಂದು ಗುರುತು ಹಿಡಿಯುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ.

ಆರ್‌.ಮಂಜುನಾಥ್‌: ಮೂಲತಃ ಕೌದಳ್ಳಿ ಬಳಿಯ ದೊಡ್ಡಾಲತ್ತೂರು ಗ್ರಾಮದವರಾದ ಇವರು ಬಾಲ್ಯದಲ್ಲಿಯೇ ಬಡತನದ ಬೇಗೆಯಿಂದ ಮುಕ್ತಿ ಪಡೆಯಲು ಬೆಂಗಳೂರು ಸೇರಿದವರು. ಅಲ್ಲಿ ದೊಡ್ಡ ಉದ್ಯಮಿಯಾಗಿ ಭದ್ರವಾದ ನೆಲೆ ಕಂಡುಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಮೊದಲಿಗೆ ಬಿಜೆಪಿ ಪಕ್ಷ ಬಲವರ್ಧನೆಗಾಗಿ ಶ್ರಮಿಸಿ ಕ್ಷೇತ್ರದಾದ್ಯಂತ ಸಂಚರಿಸಿ ಕಾರ್ಯಕರ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಇವರು ಹನೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಪ್ರಬಲ ಆಕಾಂಕ್ಷಿಯಾಗಿದ್ದರು. ಇದೀಗ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT