ಮಾಲೂರು: ವೇತನ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ ಕಾರಣಕ್ಕೆ ಕಾರ್ಮಿಕರನ್ನು ದೆಹಲಿಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ತಾಲ್ಲೂಕಿನ ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿರುವ ಜಿಕೋ ಏರಕಾನ್ ಕಾರ್ಖಾನೆಯ ಕಾರ್ಮಿಕರು ಗುರುವಾರ ಧರಣಿ ನಡೆಸಿ ಪ್ರತಿಭಟಿಸಿದರು.
ಕಾರ್ಮಿಕ ಮುಖಂಡ ಚಂದ್ರಪ್ಪ ಮಾತನಾಡಿ, ಸುಮಾರು 60 ಸ್ಥಳೀಯ ಕಾರ್ಮಿಕರು 14 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ರಾತ್ರಿ 8ರವರೆಗೂ ಕೆಲಸ ಮಾಡಿಸಿಕೊಳ್ಳುತ್ತಾರೆ. ವೇತನ ಮಾತ್ರ ₹8 ಸಾವಿರದಿಂದ ₹12 ಸಾವಿರ ಮಾತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಆರಂಭದಲ್ಲಿ ತಿಂಗಳಿಗೆ ₹20 ಲಕ್ಷದಷ್ಟು ವಹಿವಾಟು ನಡೆಸುತ್ತಿದ್ದ ಕಾರ್ಖಾನೆ ಪ್ರಸ್ತುತ ತಿಂಗಳಿಗೆ ₹1 ಕೋಟಿಯಷ್ಟು ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಆದರೆ, ವೇತನ ಮಾತ್ರ ಕಡಿಮೆ ನೀಡುತ್ತಿದ್ದಾರೆ. ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸಿದರೆ ದೆಹಲಿಗೆ ವರ್ಗಾಯಿಸುತ್ತಾರೆ. ₹10 ಸಾವಿರ ವೇತನ ಪಡೆದು ದೆಹಲಿಯಲ್ಲಿ ಹೇಗೆ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕಿಡಿ ಕಾರಿದರು.
ಆಡಳಿತ ಮಂಡಳಿ ವೇತನ ಸೇರಿದಂತೆ ಕಾರ್ಖಾನೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವದಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಮಾರಸಂದ್ರ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ತುರುಗಲೂರು ರಾಜೇಶ್, ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಸಂಪತ್, ಚೇತನ್, ಎನ್.ಸಿ.ಮಂಜುನಾಥ್, ಲಕ್ಷ್ಮಿಕಾಂತ್, ನಾಗೇಶ್, ಶ್ರೀಧರ್, ವೆಂಕಟಸ್ವಾಮಿ ಭಾಗವಹಿಸಿದ್ದರು.