ಮುಳಬಾಗಿಲು: ನಗರದ ಆಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿಯಾಗಿವೆ.
ವಾಲಿಗುಂಟೆ ಗ್ರಾಮದ ರೈತ ಸುಬ್ರಮಣ್ಯಂ ಎಂಬುವರು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿದೆ. ಮೂರು ಕುರಿಗಳನ್ನು ಕೊಂದು, ಒಂದು ಕುರಿಯನ್ನು ಎಳೆದುಕೊಂಡು ಬೆಟ್ಟದತ್ತ ಹೋಗುತ್ತಿದ್ದದ್ದನ್ನು ನೋಡಿದ ಅವರು ಭಯಗೊಂಡು ಉಳಿದ ಕುರಿಗಳೊಂದಿಗೆ ಮನೆಗೆ ವಾಪಸ್ ಬಂದಿದ್ದಾರೆ.
ಆಂಜನಾದ್ರಿ ಬೆಟ್ಟಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಹತ್ತು ಕುಟುಂಬಗಳಿವೆ. ಪಶುಪಾಲನೆ ಮತ್ತು ಕುರಿ ಸಾಕಾಣಿಕೆಯೇ ಇವರ ಆದಾಯದ ಮೂಲ. ಕಳೆದ ವರ್ಷ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಬೆಟ್ಟದ ಸುತ್ತಮುತ್ತ ಕುರಿಗಳನ್ನು ಮೇಯಿಸಲು ಕುರಿಗಾಹಿಗಳು ಭಯಪಡುತ್ತಿದ್ದಾರೆ. ಕೂಡಲೇ, ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬೆಟ್ಟದಲ್ಲಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.