ಬೆಂಗಳೂರು: ಪಾನಮತ್ತನಾಗಿ ಲಾರಿ ಚಾಲನೆ ಮಾಡಿದ ಆರೋಪದಡಿ ವಿಆರ್ಎಲ್ ಚಾಲಕ ಮಲ್ಲಪ್ಪ ವಿರುದ್ಧ ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ನಿವಾಸಿ ಮಲ್ಲಪ್ಪ, ಸರಕು ತುಂಬಿದ್ದ ಲಾರಿ (ಕೆಎ 25 ಡಿ 5458) ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ– 4ರ ಮೂಲಕ ಹುಬ್ಬಳ್ಳಿಗೆ ಹೊರಟಿದ್ದರು.
ಚೊಕ್ಕಸಂದ್ರ ಕ್ರಾಸ್ನಲ್ಲಿ ಮಂಗಳವಾರ ಬೆಳಿಗ್ಗೆ ಸಿಬ್ಬಂದಿ, ವಾಹನಗಳ ತಪಾಸಣೆ ನಡೆಸುತ್ತಿದ್ದರು. ಚಾಲಕ, ಅಡ್ಡಾದಿಡ್ಡಿಯಾಗಿ ಲಾರಿ ಚಲಾಯಿಸಿಕೊಂಡು ಬರುತ್ತಿರುವುದನ್ನು ಸಿಬ್ಬಂದಿ ನೋಡಿದ್ದರು. ಅನುಮಾನಗೊಂಡು ಲಾರಿ ತಡೆದು ತಪಾಸಣೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದರು.
‘ವೈದ್ಯಕೀಯ ಪರೀಕ್ಷೆ ನಡೆಸಿ ಚಾಲಕನನ್ನು ಕಳುಹಿಸಿದ್ದೇವೆ. ನ್ಯಾಯಾಲಯದಲ್ಲಿ ದಂಡ ಪಾವತಿಸಿ, ಜಪ್ತಿ ಮಾಡಲಾದ ವಾಹನವನ್ನು ಬಿಡಿಸಿಕೊಂಡು ಹೋಗುವಂತೆ ನೋಟಿಸ್ ನೀಡಿದ್ದೇವೆ’ ಎಂದರು.