ಕೋಲಾರ: ‘ಸಂಸದ ಎಸ್.ಮುನಿಸ್ವಾಮಿಯವರ ಸವಾಲನ್ನು ಕಾಂಗ್ರೆಸ್ ಪಕ್ಷ ಸ್ವೀಕರಿಸಿದೆ. ಅವರಿಗೆ ತಾಕತ್ತಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕ ನಂಜೇಗೌಡರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಪ್ರತಿ ಸವಾಲು ಹಾಕಿದರು.
ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಾಳಿಯಲ್ಲಿ ಗೆದ್ದು ಬಂದಿರುವ ಮುನಿಸ್ವಾಮಿ ಅವರು ವರ್ತನೆ ಬದಲಿಸಿಕೊಳ್ಳದಿದ್ದರೆ ಕ್ಷೇತ್ರದಿಂದ ಓಡಿಸುವುದು ಖಚಿತ’ ಎಂದು ವಾಗ್ದಾಳಿ ನಡೆಸಿದರು.
‘ಈ ಹಿಂದೆ ನಮ್ಮ ಪಕ್ಷದ ಮುಖಂಡರಲ್ಲಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಮುನಿಸ್ವಾಮಿಯವರು ಗಾಳಿಯಲ್ಲಿ ಗೆದ್ದು ಬಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಹಾಕಿರುವ ಸವಾಲು ಸ್ವೀಕರಿಸಿ ಚುನಾವಣಾ ಅಖಾಡಕ್ಕೆ ಸ್ವಾಗತಿಸುತ್ತೇವೆ. ಅವರು ರಾಜೀನಾಮೆ ಕೊಟ್ಟರೆ 6 ತಿಂಗಳಲ್ಲಿ ಉಪ ಚುನಾವಣೆ ನಡೆಯುತ್ತದೆ. ನಂಜೇಗೌಡರನ್ನು ಹೇಗೆ ಗೆಲ್ಲಿಸಬೇಕೆಂದು ನಮಗೆ ಗೊತ್ತಿದೆ’ ಎಂದು ಸವಾಲು ಹಾಕಿದರು.
‘ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಲಕ್ಷ ಸಾವಿರ ಕೋಟಿ ಪ್ಯಾಕೇಜ್ನಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ. ಕೇಂದ್ರವು ರೈತರಿಗೆ ಸಾಲ ನೀಡುವ ಮೂಲಕ ಮತ್ತೆ ಸಾಲಗಾರರಾಗಿ ಮಾಡುತ್ತಿದೆ. ರೈತರು ಬೆಳೆದಿರುವ ತರಕಾರಿಗಳಿಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರಕ್ಕೆ ರೈತರ ಬಗ್ಗೆ ಕಾಳಜಿಯಿದ್ದರೆ ತರಕಾರಿ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.