ಕೋಲಾರ: ‘ರಾಜ್ಯದಲ್ಲಿ ಲಾಕ್ಡೌನ್ ಅಂತ್ಯಗೊಂಡ ಬಳಿಕ ಮೇ 3ರ ನಂತರವೂ ಮದ್ಯದಂಗಡಿ ತೆರೆಯುವುದು ಕಷ್ಟ ಸಾಧ್ಯ’ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೇ 3ರ ನಂತರ ಮದ್ಯದ ವಹಿವಾಟಿಗೆ ಅವಕಾಶ ನೀಡುವ ಚಿಂತನೆಯಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಅನುಮತಿ ನೀಡದ ಕಾರಣ ಮೇ 15ರವರೆಗೂ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಕೊರೊನಾ ಸೋಂಕು ಪತ್ತೆಯಾಗದ ಹಸಿರು ವಲಯದ ಜಿಲ್ಲೆಗಳಲ್ಲೂ ಮದ್ಯದಂಗಡಿ ತೆರೆಯುವಂತಿಲ್ಲ. ಮದ್ಯ ವ್ಯಸನಿಗಳು ವೈದ್ಯರ ಬಳಿ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು’ ಎಂದು ಹೇಳಿದರು.