ಕೋಲಾರ: ‘ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು’ ಎಂದು ಅರ್ಕ ಶಾಲೆಯ ಸಂಸ್ಥಾಪಕ ಡಾ.ವೇಣುಗೋಪಾಲ್ ತಿಳಿಸಿದರು.
ತಾಲ್ಲೂಕಿನ ಮಡೇರಹಳ್ಳಿಯ ಅರ್ಕ ಅಂತರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕನ್ನಡ ಭಾಷೆ ಪುರಾತನ ಮತ್ತು ಶ್ರೀಮಂತ ಭಾಷೆಯಾಗಿದೆ. ನಮ್ಮ ಭಾಷೆಯಷ್ಟು ಸುಂದರ ಬೇರೆ ಭಾಷೆ ಇಲ್ಲ, ನಾವು ಹೆತ್ತ ತಾಯಿಯನ್ನು ಪ್ರೀತಿಸಿದಂತೆಯೇ ಭಾಷೆಯನ್ನು ಪ್ರೀತಿಸಬೇಕು’ ಎಂದು ಹೇಳಿದರು.
‘ಆಡಳಿತಾಧಿಕಾರಿ ಜೆ.ಎನ್.ರಾಮಕೃಷ್ಣ ಮಾತನಾಡಿ, ‘ನಾವು ಬದುಕಿಗೆ ಯಾವುದೇ ಭಾಷೆ ಕಲಿತರು ಅದರ ಜತೆಗೆ ಕನ್ನಡ ಭಾಷೆ ಬಳಕೆ ಹೆಚ್ಚಾಗಿರಬೇಕು’ ಎಂದು ತಿಳಿಸಿದರು.
‘ಕನ್ನಡ ನಾಡು, ಭಾಷೆ ಮರೆತರೆ ಹೆತ್ತ ತಾಯಿಯನ್ನೇ ಮರೆತಂತೆ. ಪ್ರತಿಯೊಬ್ಬರೂ ಈ ನಾಡಿನ ಘನತೆಗೆ ಕುತ್ತಾಗದಂತೆ ನಡೆದುಕೊಳ್ಳಬೇಕು, ಭಾಷೆಯನ್ನು ಬೆಳೆಸಬೇಕು. ಗಡಿ ಜಿಲ್ಲೆಯಿಂದ ಕನ್ನಡದ ಕಂಪನ್ನು ಪರಿಸಬೇಕು. ಹೆಚ್ಚಾಗಿ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ಹೇಳಿದರು.