ಕೋಲಾರ: ‘ಕೇಂದ್ರ ಸಚಿವ ಸಂಪುಟದಲ್ಲಿ ಸಚಿವನಾಗಲು ಪ್ರಯತ್ನಿಸಲು ನಾನು ದೊಡ್ಡವನಲ್ಲ, ಜನ ನೀಡಿರುವ ಅವಕಾಶವನ್ನು ಜವಬ್ದಾರಿಯಿಂದ ನಿರ್ವಹಿಸುತ್ತೇನೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ತರಲು ಎಲ್ಲಾ ರೀತಿಯ ಅಕಾಶಗಳಿವೆ. ಅಷ್ಟು ಸಾಕು’ ಎಂದರು.
‘ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲು ಆದ್ಯತೆ ನೀಡಬೇಕು. ಅದಾದ ಬಳಿಕ ವ್ಯವಹಾರಿಕವಾಗಿ ಹಿಂದಿ, ಇಂಗ್ಲೀಷ್ ಕಲಿತುಕೊಳ್ಳಲಿ ಯಾರ ಅಭ್ಯಂತರವೂ ಇಲ್ಲ’ ಎಂದು ಅಭಿಪ್ರಾಯಿಸಿದರು.
‘ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ಜನಪ್ರತಿನಿಧಿಗಳೊಂದಿಗೆ ಪಕ್ಷಾತೀತವಾಗಿ ಜೂ.12ಕ್ಕೆ ತೆರಳಿ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದೇವೆ’ ಎಂದು ಹೇಳಿದರು.
‘ಅಧಿಕಾರ ಸಿಕ್ಕ ಮೇಲೆ ದುರುಪಯೋಗ ಪಡಿಸಿಕೊಳ್ಳಬಾರದು. ಪಕ್ಷಾತೀತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ನಾನು ಯಾರನ್ನು ವಿಂಗಡಣೆ ಮಾಡಿ ಕೆಲಸ ಮಾಡುವುದಿಲ್ಲ. ಕ್ಷೇತ್ರದಲ್ಲಿ ಹಿರಿಯ ನಾಯಕರ ಸಲಹೆ ಪಡೆದು ಕೆಲಸ ಮಾಡುತ್ತೇನೆ’ ಎಂದರು.