ಪೌಲ್ಟ್ರಿ ಫಾರಂಗೆ ನೋಟಿಸ್ ಜಾರಿ

ಬಂಗಾರಪೇಟೆ: ಪೌಲ್ಟ್ರಿ ಫಾರಂನಲ್ಲಿ ಸ್ವಚ್ಛತೆ ನಿರ್ವಹಿಸಬೇಕು ಎಂದು ಸೂಚಿಸಿ ಮಾವಳ್ಳಿ ಗ್ರಾಮ ಪಂಚಾಯಿತಿಯ ಐತಾಂಡಹಳ್ಳಿ ಬಳಿ ಇರುವ ಲಕ್ಷ್ಮೀವೆಂಕಟೇಶ್ವರ ಪೌಲ್ಟ್ರಿ ಫಾರಂ ಮಾಲೀಕರಿಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್ ಅವರು ನೋಟಿಸ್ ಜಾರಿ ಮಾಡಿದರು.
ಪೌಲ್ಟ್ರಿ ಫಾರಂನಿಂದಾಗಿ ಗ್ರಾಮಗಳಲ್ಲಿ ನೊಣಗಳ ಸಂಖ್ಯೆ ಹೆಚ್ಚಿದ್ದು, ಸಾಂಕ್ರಾಮಿಕ ರೋಗ ಹರಡುವ ಬೀತಿ ಹೆಚ್ಚಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೌಲ್ಟ್ರಿ ಫಾರಂನಲ್ಲಿ ಸ್ವಚ್ಛತೆ ಇಲ್ಲದಿರುವುದು, ಕೋಳಿ ಫಾರಂ ಪರವಾನಗಿ ನವೀಕರಣ ಮಾಡದಿರುವುದಿರುವುದು ಗಮನಕ್ಕೆ ಬಂದಿದೆ. ಆದರೆ, ಕೋಳಿ ಫಾರಂ ಕೃಷಿ ಚಟುವಟಿಕೆಯಡಿ ಬರುವ ಕಾರಣ ಅದನ್ನು ಬಂದ್ ಮಾಡಲು ಸಾಧ್ಯವಿಲ್ಲ. ಮೂರು ದಿನದಲ್ಲಿ ಔಷಧಿ ಸಿಂಪಡಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಎಚ್ಚರಿಸಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಕಾರಹಳ್ಳಿ ಗ್ರಾ.ಪಂ. ಸದಸ್ಯ ಬ್ಯಾಟಪ್ಪ ಮಾತನಾಡಿ, ಕಾವರನಹಳ್ಳಿ, ಕಲ್ಕೆರೆ, ನೇರ್ನಹಳ್ಳಿ, ಐತಾಂಡಹಳ್ಳಿ ಗ್ರಾಮಗಳ ಮಧ್ಯದಲ್ಲಿ ಇರುವ ಈ ಕೋಳಿ ಫಾರಂನಿಂದ ನಾಲ್ಕೂ ಗ್ರಾಮಗಳಿಗೆ ತೊಂದರೆಯಾಗಿದೆ ಎಂದರು.
‘ನೋಣಗಳ ಕಾಟ ತಡೆಯಲಾಗುತ್ತಿಲ್ಲ. ಊಟ, ನೀರು, ಹಾಲಿನ ಮೇಲೆ, ಎಳೆ ಮಕ್ಕಳ ಮೇಲೆ, ಎಲ್ಲೆಂದರಲ್ಲಿ ದಾಳಿ ಮಾಡುತ್ತಿವೆ. ಸತತವಾಗಿ ಮೂರು ವರ್ಷದಿಂದ ಸಮಸ್ಯೆ ಮುಂದುವರಿದಿದೆ. ‘ಕೋಳಿ ಫಾರಂಗೆ ಯಾವುದೇ ಪರವಾನಗಿ ಇಲ್ಲ. ಈ ಬಗ್ಗೆ ಅಧಿಕಾರಿಗಳು ನಮಗೆ ಸರಿಯಾಗಿ ಸ್ಪಂದಿಸಿಲ್ಲ’ ಎಂದು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.