ಶ್ರೀನಿವಾಸಪುರ: ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಯನ್ನು ವಿರೋಧಿಸಿ ತಾಲ್ಲೂಕು ರೈತ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ರೈತ ಸಂಘಟನೆ ಉಪಾಧ್ಯಕ್ಷ ಕೆ.ರಘುನಾಥರೆಡ್ಡಿ ಮಾತನಾಡಿ, ‘ತಾಲ್ಲೂಕಿನ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಿಟ್ಟು ಪಕ್ಕದ ಯರ್ರಂವಾರಿಪಲ್ಲಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮದಡಿ ಕಸ ವಿಲೇವಾರಿ ಘಟಕ ಸ್ಥಾಪಿಸಿದ್ದಾರೆ’ ಎಂದು ಹೇಳಿದರು.
‘ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅಗತ್ಯವಾದ ಜಮೀನು ಇದ್ದರೂ, ವಿನಾಕಾರಣ ತಮ್ಮ ವ್ಯಾಪ್ತಿಗೆ ಸೇರದ ಪ್ರದೇಶದಲ್ಲಿ ಸ್ಥಾಪಿಸಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಕೊಳವೆ ಬಾವಿಗಳ ನೀರು ಕಲುಷಿತಗೊಳ್ಳುತ್ತದೆ. ಪ್ಲಾಸ್ಟಿಕ್ ಮತ್ತಿತರ ಅನುಪಯುಕ್ತ ವಸ್ತುಗಳನ್ನು ಸುಡುವುದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಅಲ್ಲಿಂದ ಬರುವ ಹೊಗೆ ಸಮೀಪದಲ್ಲಿಯೇ ಇರುವ ದೇವಾಲಯದ ವಾತಾವರಣ ಕೆಡುವಂತೆ ಮಾಡುತ್ತದೆ’ ಎಂದು ಹೇಳಿದರು.
‘ಸ್ಥಾಪಿಸಲಾಗಿರುವ ಕಸ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು. ಈಗ ಸ್ಥಾಪಿಸಲಾಗಿರುವ ಸ್ಥಳದಲ್ಲಿ ಕಸ ಸುರಿಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
ಮುಖಂಡ ಕೆ.ರಘುನಾಥರೆಡ್ಡಿ, ರಾಮಚಂದ್ರಾರೆಡ್ಡಿ, ಕೆ.ಜೆ.ಶ್ರೀನಿವಾಸ್, ವಿಶ್ವನಾಥರೆಡ್ಡಿ, ಧರ್ಮ, ಸುಬ್ಬಾರೆಡ್ಡಿ, ಭಾಸ್ಕರ್ ರೆಡ್ಡಿ ಇದ್ದರು.