ಬಂಗಾರಪೇಟೆ: ಪಟ್ಟಣದಲ್ಲಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದ ಕುಟುಂಬಗಳು ಲಾಕ್ಡೌನ್ನಿಂದಾಗಿ ಬೀದಿಪಾಲಾಗಿವೆ. ಸರ್ಕಾರಕ್ಕೆ ನಮ್ಮ ಕೂಗು ಕೇಳುತ್ತಿಲ್ಲವೆ ಎಂದು ಪಾನಿಪೂರಿ ವರ್ತಕರ ಸಂಘದ ಪದಾಧಿಕಾರಿ ಜಿತ್ತು ಅಳಲು ತೋಡಿಕೊಂಡರು.
ಪಟ್ಟಣದಲ್ಲಿ ಪಾನಿಪೂರಿ ವರ್ತಕರ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪಟ್ಟಣದಲ್ಲಿ 80 ಪಾನಿಪೂರಿ ಅಂಗಡಿಗಳಿವೆ. ಪ್ರತಿ ಅಂಗಡಿಯಲ್ಲಿ 4 ಜನರು ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಈ ವ್ಯಾಪಾರವನ್ನೇ ನೆಚ್ಚಿಕೊಂಡಿವೆ. ತಾಲ್ಲೂಕು ಆಡಳಿತ 2 ಗಂಟೆಯಿಂದ ಲಾಕ್ಡೌನ್ ಘೋಷಿಸಿದೆ. ಯಾವುದೇ ಅಂಗಡಿಗಳು ತೆರೆಯದಂತೆ ಆದೇಶಿಸಿದೆ. ಆದರೆ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗಿನ ಅವಧಿಯಲ್ಲಿ ಮಾತ್ರ ಪಾನಿಪೂರಿ ಅಂಗಡಿ ವ್ಯಾಪಾರ ನಡೆಯುತ್ತದೆ ಎಂದರು.
ಮಧ್ಯಾಹ್ನ 2 ಗಂಟೆಯಿಂದ 10 ಗಂಟೆವರೆಗೂ ಪಾನಿಪೂರಿ ಅಂಗಡಿ ತೆರೆಯಲು ಅವಕಾಶ ನೀಡಬೇಕು. ಇಲ್ಲವಾದರೆ ಕುಟುಂಬ ನಿರ್ವಹಣೆಗಾಗಿ ವಿಶೇಷ ಪ್ಯಾಕೇಜ್ ಒದಗಿಸಬೇಕು ಎಂದು ಒತ್ತಾಯಿಸಿದರು.
ನೂತನ ಪದಾಧಿಕಾರಿಗಳು: ಗೌರವಾಧ್ಯಕ್ಷ- ರಮೇಶ್, ಅಧ್ಯಕ್ಷ- ಮಂಜು, ಪ್ರಧಾನ ಕಾರ್ಯದರ್ಶಿ- ಸರವಣ, ಉಪಾಧ್ಯಕ್ಷ ಜಾಮೂನ್ ಮಂಜು, ಕಾರ್ಯದರ್ಶಿ ಪಮ್ಮಿ, ಜಂಟಿ ಕಾರ್ಯದರ್ಶಿ ಸಂಪತ್, ಖಜಾಂಚಿ- ಪ್ರಮೋದ್, ಸಲಹೆಗಾರ ರಾಮಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯರು- ವಿಕ್ಕಿ, ಪ್ರದೀಪ್ ಆಯ್ಕೆಯಾದರು.
ಪಲ್ಲವಿಮಣಿ, ಪುರಸಭೆ ಸದಸ್ಯ ವೆಂಕಟೇಶ್, ಎಸ್.ನಾರಾಯಣ್, ಸೋಮಣ್ಣ, ಶ್ರೀಧರ್, ಚಂದ್ರು, ನಾರಾಯಣಪ್ಪ, ರಮೇಶ್, ವಾಸು, ಪ್ರಸನ್ನ, ಮೂರ್ತಿ ಇದ್ದರು.