ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್ | ಡಿಕೆ ಹಳ್ಳಿ ಪ್ಲಾಂಟೇಷನ್‌: ನಿರಂತರ ಒತ್ತುವರಿ

ಅರಣ್ಯ ಇಲಾಖೆಗೆ ವರ್ಗಾಯಿಸದ ಕಂದಾಯ ಇಲಾಖೆ
Published 16 ಸೆಪ್ಟೆಂಬರ್ 2023, 6:07 IST
Last Updated 16 ಸೆಪ್ಟೆಂಬರ್ 2023, 6:07 IST
ಅಕ್ಷರ ಗಾತ್ರ

ವರದಿ – ಕೃಷ್ಣಮೂರ್ತಿ

ಕೆಜಿಎಫ್: ದೊಡ್ಡೂರು ಕರಪನಹಳ್ಳಿಯ ನೂರಾರು ಎಕರೆ ಜಮೀನಿನಲ್ಲಿ ಪ್ಲಾಂಟೇಷನ್ ಇದ್ದರೂ, ಅದನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡದ ಕಾರಣ ದಿನೇ ದಿನೇ ಭೂ ಮಾಫಿಯಾಗಳು ನಕಲಿ ದಾಖಲೆ ಮೂಲಕ ಭೂಮಿ ಒತ್ತುವರಿ ಮಾಡಿಕೊಳ್ಳುತ್ತಿರುವ ಆತಂಕ ಎದುರಾಗಿದೆ.

ಡಿಕೆ ಹಳ್ಳಿ ಪ್ಲಾಂಟೇಷನ್ ಎಂದೇ ಹೆಸರಾಗಿರುವ ಈ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೃಷ್ಣಮೃಗಗಳಿವೆ. ದಿನೇ ದಿನೇ ಅವುಗಳ ಸಂಖ್ಯೆ ಹೆಚ್ಚಾಗುತ್ತಿ್ದು, ಅವು ಕಾಡು ತ್ಯಜಿಸಿ ನಾಡಿಗೆ ಬಂದು ಬೀದಿ ನಾಯಿಗಳ ಹಾವಳಿ ಅಥವಾ ವಾಹನಗಳಿಗೆ ಸಿಕ್ಕಿ ಸಾಯುತ್ತಿವೆ. ಬೆಮಲ್ ನಗರದಿಂದ ಬಡಮಾಕನಹಳ್ಳಿ ಕಾಡಿನವರೆವಿಗೂ ಕೃಷ್ಣಮೃಗಗಳಿಗೆ ಮೀಸಲು ಅರಣ್ಯ ಪ್ರದೇಶ ಘೋಷಿಸಲು ಐದು ವರ್ಷದ ಹಿಂದೆಯೇ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವವನ್ನು ಕಳಿಸಿದ್ದರೂ, ಕಂದಾಯ ಇಲಾಖೆ ಪ್ಲಾಂಟೇಷನ್ ಭಾಗವನ್ನು ಅರಣ್ಯ ಇಲಾಖೆಗೆ ಮಂಜೂರು ಮಾಡಲು ಮೀನ ಮೇಷ ಎಣಿಸುತ್ತಿದೆ. ಇದರಿಂದ ನಿಖರ ದಾಖಲೆ ಇಲ್ಲದೆ ಅರಣ್ಯ ಇಲಾಖೆ ಒತ್ತುವರಿ ತೆರವುಗೊಳಿಸಿ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಡಿಕೆ ಹಳ್ಳಿ ಪ್ಲಾಂಟೇಷನ್ ಪಕ್ಕದಲ್ಲಿಯೇ ಬಿಜಿಎಂಎಲ್ (ಚಿನ್ನದ ಗಣಿ) ಗೆ ಸೇರಿದ ನೂರಾರು ಎಕರೆ ಜಮೀನು ಸಹ ಇದೆ. ಅದು ಕೂಡ ಇದುವರೆವಿಗೂ ಸರ್ವೆ ಆಗದ ಕಾರಣ, ಗಣಿಗೆ ಸೇರಿದ ಜಮೀನನ್ನು ಕೂಡ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿ ಕೊಳ್ಳುವ ಪರಿಪಾಠ ಹೆಚ್ಚುತ್ತಿದೆ.

ಪ್ರಾದೇಶಿಕ ಆಯುಕ್ತರು 2021ರಲ್ಲಿ ಪ್ಲಾಂಟೇಷನ್ ಸರ್ವೆ ಮಾಡಿ, ಒತ್ತುವರಿ ಗುರುತಿಸಬೇಕೆಂದು ಸೂಚಿಸಿದ್ದರು. ಆದರೆ, ಇದುವರೆವಿಗೂ ಪ್ಲಾಂಟೇಷನ್ ಸಂಪೂರ್ಣವಾಗಿ ಸರ್ವೆ ಆಗಿಲ್ಲ.

ಕೋಲಾರ ತಾಲ್ಲೂಕಿನಲ್ಲಿ 85 ಎಕರೆ ಪ್ಲಾಂಟೇಷನ್‌ ಅನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಮಾಲೂರು ತಾಲ್ಲೂಕಿನಲ್ಲಿ ಸುಮಾರು 1300 ಎಕರೆ ಪ್ಲಾಂಟೇಷನ್ ಇದ್ದು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಆದರೆ, ಡಿಕೆ ಹಳ್ಳಿಯ ಪ್ಲಾಂಟೇಷನ್ ಮಾತ್ರ ಗೋಮಾಳವಾಗಿ ಉಳಿದಿದ್ದು, ಹೊಸ ಸರ್ವೆ ನಂಬರ್ ಸೃಷ್ಟಿಸಿ ಒತ್ತುವರಿ ಮಾಡಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿ ಬಂದಿವೆ. ನಂಬರ್ ಕಾಣದ ಖರಾಬ್ ಎಂಬ ಹೆಸರಿನಲ್ಲಿ ನೂರಾರು ಎಕರೆ ಜಮೀನು ವಿಲೇ ಆಗಿದೆ. ಅವೆಲ್ಲಕ್ಕೂ ಹೊಸ ನಂಬರ್ ನೀಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಮಾರು 1000ಕ್ಕೂ ಹೆಚ್ಚು ಎಕರೆ ಜಮೀನಿನ ಪೈಕಿ ಒಂದು ಎಕರೆ ಕೂಡ ಅರಣ್ಯ ಇಲಾಖೆಗೆ ಹಸ್ತಾಂತರವಾಗಿಲ್ಲ. ಆದರೆ, ಕಂದಾಯ ಇಲಾಖೆ ಸಾರ್ವಜನಿಕರಿಗೆ ಈ ಜಾಗವನ್ನು ಮಂಜೂರು ಮಾಡುತ್ತಿದೆ. ದರಕಾಸ್ತು ಸಾಗುವಳಿ ಹೆಸರಿನಲ್ಲಿ ಜಮೀನು ಮಂಜೂರು ಮಾಡಲಾಗುತ್ತಿದೆ. ಡಿಕೆ ಹಳ್ಳಿ ಪಂಚಾಯಿತಿ ಅಧಿಕಾರಿಗಳು ಇಂತಹ ಜಾಗದಲ್ಲಿ ಭೂ ಪರಿವರ್ತನೆ ಆಗದೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ.

ಪ್ರಸ್ತುತ ಇದೇ ಪ್ರದೇಶದಲ್ಲಿ ಬೆಂಗಳೂರು-ಚೆನ್ನೈ ಎಕ್ಸಪ್ರೆಸ್‌ ಕಾರಿಡಾರ್ ಹಾದು ಹೋಗುತ್ತಿದೆ. ಹೆದ್ದಾರಿಯಿಂದ ಬೆಮಲ್ ನಗರಕ್ಕೆ ಬರಲು ದೊಡ್ಡ ರಸ್ತೆ ನಿರ್ಮಾಣವಾಗುತ್ತಿದೆ. ಆದ್ದರಿಂದ ಈ ಪ್ರದೇಶಕ್ಕೆ ಚಿನ್ನದ ಬೆಲೆ ಬಂದಿದೆ. ಸರ್ಕಾರಿ ಜಾಗ ಎಗ್ಗಿಲ್ಲದೆ ಪರರ ಪಾಲಾಗುತ್ತಿದೆ ಎಂಬುದು ಸ್ಥಳೀಯರ ದೂರಾಗಿದೆ.

ಸರ್ವೆ ನಂಬರ್‌ 21 ಮತ್ತು 23ರಲ್ಲಿ ಅನೇಕ ಬಡಾವಣೆಗಳು ಬಂದಿವೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯಾಗಿದೆ. ಕೆಡಿಎ ಆನುಮೋದನೆಯಾಗಿದೆ. ಸರ್ವೆ ನಂಬರ್ 22ರಲ್ಲಿ ಅರಣ್ಯಕ್ಕೆ ಜಾಗ ಸಿಗಬಹುದು. ಅಲ್ಲಿ ಅರಣ್ಯ ಅಭಿವೃದ್ಧಿ ಮಾಡಬಹುದು
ಸುರೇಶ್‌ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಅನಧಿಕೃತ ಬಡಾವಣೆ ತೆರವು
ಜೂನ್ 30 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಪಡೆಯದೇ ಅನಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿತ್ತು. ಇಂತಹ ಬಡಾವಣೆಗಳು ಡಿಕೆ ಹಳ್ಳಿ ಗ್ರಾಮ ಪಂ
ಅನುಮತಿ ಪಡೆಯದೆ ಖಾತೆ ತೆಗೆದಿರುವ ಪಂಚಾಯಿತಿಗಳು
ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಕೆಸರನಹಳ್ಳಿ ಐನೋರ ಹೊಸಹಳ್ಳಿ ಹುಲಿಬೆಲೆ ಚಿನ್ನಕೋಟೆ ದೊಡ್ಡೂರು ಕರಪನಹಳ್ಳಿ ಮತ್ತು ಕೆಜಿಎಫ್ ತಾಲ್ಲೂಕಿನ ಘಟ್ಟಕಾಮಧೇನಹಳ್ಳಿ ಕಮ್ಮಸಂದ್ರ ಬೇತಮಂಗಲ ಮತ್ತು ಪಾರಾಂಡಹಳ್ಳಿ ಈ ಪಂಚಾಯಿತಿಗಳು ಅನುಮತಿ ಪಡೆಯದೆ ಖಾತೆ ತೆಗೆದಿದ್ದಾವೆ.
ಕಂದಾಯ ಇಲಾಖೆಗೆ ಮನಸ್ಸಿಲ್ಲ
ಬಡಮಾಕನಹಳ್ಳಿ ಕಾಡು ಪ್ರದೇಶ ಮತ್ತು ಬಿಜಿಎಂಎಲ್‌ಗೆ ಹೊಂದಿಕೊಂಡಿರುವ ಡಿಕೆ ಹಳ್ಳಿ ಪ್ಲಾಂಟೇಷನ್ ಅರಣ್ಯ ಇಲಾಖೆ ವ್ಯಾಪ್ತಿಗೆ ನೀಡಲು ವಿಸ್ತೃತ ಪ್ರಸ್ತಾವವನ್ನು ಸರ್ಕಾರಕ್ಕೆ ಕಳಿಸಲಾಗಿತ್ತು. ಆದರೆ ಕಂದಾಯ ಇಲಾಖೆ ಈ ಪ್ರದೇಶವನ್ನು ನೀಡಲು ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಒತ್ತುವರಿಯನ್ನು ತಡೆದು ಕೃಷ್ಣಮೃಗಗಳಿಗೆ ವನ್ಯಧಾಮ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT