ಮುಳಬಾಗಿಲು: ನಗರದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ವ್ಯಕ್ತಿಯೊಬ್ಬರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಗರದ ನೂಗಲಬಂಡೆ ಪ್ರದೇಶದ ಚಿಂದಿ ಹಾಯುವ ಇಮ್ರಾನ್ ಪಾಷ (35) ಮೃತರು.
ಜುಲೈ 6 ರಂದು ನಗರದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಇರುವ ಕಲ್ಯಾಣಿಯಲ್ಲಿ ಇಮ್ರಾನ್ ಪಾಷ ಈಜಲು ಹೋಗಿದ್ದರು. ಈಜುವ ವೇಳೆ ನಿತ್ರಾಣಗೊಂಡು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ಸುತ್ತಮುತ್ತಲಿನ ಕೆಲವು ವ್ಯಾಪಾರಿಗಳು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಅಗ್ನಿಶಾಮಕ ದಳ ಕರೆಸಿ ಪ್ರಯತ್ನ ನಡೆಸಲಾಯಿತು. ಆದರೂ ಪ್ರಯತ್ನ ವಿಫಲವಾಯಿತು.
ಕೋಲಾರದಿಂದ ದೋಣಿ ಮತ್ತು ಮುಳುಗು ತಜ್ಞರನ್ನು ಕರೆಸಿ ಸುಮಾರು ಮೂರು ದಿನಗಳ ಕಾರ್ಯಾಚರಣೆ ಬಳಿಕ ಶನಿವಾರ ಮೃತ ದೇಹವನ್ನು ಕಲ್ಯಾಣಿಯಿಂದ ಹೊರ ತೆಗೆಯಲಾಗಿದೆ.
ಡಿವೈಎಸ್.ಪಿ ಟಿ. ಆರ್.ಜಯಶಂಕರ್, ನಗರಠಾಣೆ ಇನ್ಸ್ಪೆಕ್ಟರ್ ಸುರೇಶ್ ಕುಮಾರ್, ಗ್ರಾಮಾಂತರ ಇನ್ಸ್ಪೆಕ್ಟರ್ ಲಕ್ಷ್ಮಿ ಕಾಂತಯ್ಯ, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡ ಮೂರು ದಿನಗಳಿಂದ ಕಲ್ಯಾಣಿ ಬಳಿ ಬೀಡು ಬಿಟ್ಟಿತ್ತು.
ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.