ಚಾಮರಾಜನಗರ: ತಾಲ್ಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಶುಕ್ರವಾರ ಶೃಂಗೇರಿ ಶಂಕರಮಠದ 12ನೇ ವಾರ್ಷಿಕೋತ್ಸವ ನಿಮಿತ್ತ ಶಾರದಾ ಪರಮೇಶ್ವರಿ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು.
ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರ ಅನುಮತಿಯ ಮೇರೆಗೆ ಬೆಳಿಗ್ಗೆ 10ಗಂಟೆಗೆ ಶಾರದಾಂಬಾ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂಡ್ರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಧ್ಯಾಹ್ನ 12.30ಕ್ಕೆ ರಥ ಸ್ವಸ್ಥಾನ ಸೇರಿತು. ರಥೋತ್ಸವ ಸಾಗುವ ಬೀದಿಗಳಲ್ಲಿನ ಪ್ರತಿ ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು.
ಭಕ್ತರು ಶಾರದಾ ಪರಮೇಶ್ವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ಶಂಕರ ಮಠದ ಧರ್ಮಾಧಿಕಾರಿ ಎಚ್.ಎಸ್.ಶ್ರೀಧರ್ ಪ್ರಸಾದ್ ಉಪಸ್ಥಿತರಿದ್ದರು.