ಕೋಲಾರ: ‘ವಿವಿಧ ಅಡಮಾನ ಸಾಲ ಕಂತು ಪಾವತಿ ಮಾಡದೆ ಬಾಕಿ ಉಳಿಸಿಕೊಂಡವರು ಕೊನೆ ನೋಟಿಸುಗೂ ಮಣಿದಿದ್ದರೆ, ಆಸ್ತಿಯನ್ನು ಹರಾಜು ಮಾಡಬೇಕಾಗುತ್ತೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಬ್ಯಾಂಕಿನ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಸಾಲ ವಸೂಲಾತಿ ಸಿಬ್ಬಂದಿ ಪ್ರತಿದಿನ ಅವರ ಮನೆಗೆ ಸುತ್ತಾಡಿದರು ಸಾಲ ಕಟ್ಟುತ್ತಿಲ್ಲ. ಅಧಿಕಾರಿಗಳು ಕಾನೂನಿನ ಪ್ರಕಾರ ಅವರ ಆಸ್ತಿಯನ್ನು ಹರಾಜಿಗೆ ಹಾಕಿ’ ಎಂದು ಸೂಚಿಸಿದರು.
‘ಒಟ್ಟು 100 ಮಂದಿ ₨ 20 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಅವರ ಮನೆ ಬಾಗಿಲಿಗೆ ಹೋಗಿ ಒತ್ತಡ ಹಾಕಬೇಕು. ಯಾವುದೇ ಬ್ಯಾಂಕ್ ಶಾಖೆ ವ್ಯಾಪ್ತಿಯಲ್ಲಿನ ಮನೆ ಸಾಲ ವಸೂಲಿಯಲ್ಲಿ ಬದ್ಧತೆ ತೋರದ ಅಧಿಕಾರಿ, ಸಿಬ್ಬಂದಿಯ ವೇತನ ತಡೆಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಸಾಲ ಡಿಸಿಸಿ ಬ್ಯಾಂಕಿನಲ್ಲಿ ಪಡೆದುಕೊಂಡಿದ್ದು ಅವರ ವಹಿವಾಟು ಠೇವಣಿಗಳು ಬೇರೆ ಬ್ಯಾಂಕಿನಲ್ಲಿವೆ. ಬ್ಯಾಂಕಿಗೆ ಅಡ ಇಟ್ಟಿರುವ ನಿವೇಶನ, ಮನೆಗಳ ಮೇಲೆ ಸರಪ್ರೇಸ್ ಕಾಯ್ದೆ ಅಡಿ, ಫಲಾನುಭವಿಗಳಿಗೆ ಮತ್ತು ಭದ್ರತೆ ಹಾಕಿರುವ ವ್ಯಕ್ತಿಗೂ ನೊಟೀಸ್ ಜಾರಿ ಮಾಡಿ’ ಎಂದು ಹೇಳಿದರು.
‘ಬ್ಯಾಂಕಿನ ನಿಷ್ಕ್ರಿಯ ಆಸ್ತಿಯ ಮೌಲ್ಯ ಎನ್ಪಿಎ ಶೇ.೩ಕ್ಕೆ ಇಳಿಸಬೇಕು. ಕಾಯಕ ಯೋಜನೆ, ಬಡವರ ಬಂದು ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಸಂಬಂಧ, ಜ.೨ ರಂದು ಬ್ಯಾಂಕ್ ಆಡಳಿತ ಮಂಡಳಿ ಸಭೆ ಕರೆಯಲಾಗಿದ್ದು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಬ್ಯಾಂಕ್ ವಿರುದ್ಧ ಕೆಲ ವ್ಯಕ್ತಿಗಳು ಆರೋಪ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ‘ನನಗೆ ಡಿಸಿಸಿ ಬ್ಯಾಂಕ್ ಮುಖ್ಯವೇ ಹೊರತು ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವುದಲ್ಲ’ ಎಂದರು.
‘ಬ್ಯಾಂಕ್ ಹಿಂದೆ ಯಾವ ಪರಿಸ್ಥಿತಿಯಲ್ಲಿತ್ತು. ಈಗ ಹೇಗಿದೆ ಎಂಬುವುದರ ಬಗ್ಗೆ ಸಾಕ್ಷ ಚಿತ್ರವನ್ನು ನಾ ಬಾರ್ಡ್ ಬ್ಯಾಂಕ್ ಡಿಸಿಸಿ ಬ್ಯಾಂಕಿನ ಅಭಿವೃದ್ದಿ ಇತಿಹಾಸ ಸೃಷ್ಟಿಸಲಿದೆ. ಬ್ಯಾಂಕ್ ವಿರೋಧಿಗಳು ಇದನ್ನಾದರು ವೀಕ್ಷಿಸಿ ಅರ್ಥ ಮಾಡಿಕೊಳ್ಳಲಿ’ ಎಂದು ಸಲಹೆ ನೀಡಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ ಹಾಜರಿದ್ದರು.