ಬಂಗಾರಪೇಟೆ: ಆನೆದಾಳಿಯಿಂದ ಶಾಶ್ವತ ಮುಕ್ತಿಗೆ ಆಗ್ರಹಿಸಿ ಮಾ.1 ರಂದು ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮುಖಂಡ ತೊಪ್ಪನಹಳ್ಳಿ ಲಕ್ಷ್ಮಿನಾರಾಯಣ ಪ್ರಸಾದ್ ತಿಳಿಸಿದರು.
ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಸೂಚನೆ ಮೇರೆಗೆ ಭಾನುವಾರ ತೊಪ್ಪನಹಳ್ಳಿಗೆ ತಹಶೀಲ್ದಾರ್ ಎಂ.ದಯಾನಂದ ಅವರು ಭೇಟಿ ನೀಡಿ ರೈತ ಮುಖಂಡರೊಂದಿಗೆ ಚರ್ಚಿಸಿ, ಮೂರು ದಿನದೊಳಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ವಿಷಯದ ಬಗ್ಗೆ ಚರ್ಚಿಸಲಿದ್ದಾರೆ. ಪಾದಯಾತ್ರೆ ಕೈಬಿಡಬೇಕು ಎಂದು ಮನವಿ ಮಾಡಿದ ಕಾರಣ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದರು.
ದಶಕದಿಂದ ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಆನೆ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಸತತ ದಾಳಿಯಿಂದಾಗಿ ಬೆಳೆನಷ್ಟ ಅಲ್ಲದೆ ಪ್ರಾಣಹಾನಿ ಆಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಕಾಳಜಿ ಇಲ್ಲವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿ ಎರಡೂ ಹೋಬಳಿ ರೈತರು ತೊಪ್ಪನಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಬರದಿದ್ದಲ್ಲಿ ಮಾ.4ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸುತ್ತೇವೆ ಎಂದು ಲಕ್ಷ್ಮಿನಾರಾಯಣ ಪ್ರಸಾದ್ ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ರಾಮೇಗೌಡ, ಕಾ ಆದಿನಾರಾಯಣ ಕುಟ್ಟಿ, ಸಾಕರಸನಹಳ್ಳಿ ಜಯಣ್ಣ, ಮಂಜುನಾಥ್, ವರದರಾಜ್, ಶಿವಣ್ಣ, ತಿಮ್ಮಾರೆಡ್ಡಿ, ಚಾಮುಂಡಿ, ರಂಗಾಚಾರಿ, ಅಜ್ಮತ್ತುಲ್ಲಾ, ಉಪವಲಯ ಅರಣ್ಯ ಅಧಿಕಾರಿ ನವೀನ್ಕುಮಾರ್, ಸಬ್ಇನ್ಸ್ಪೆಕ್ಟರ್ ದಯಾನಂದ ಇದ್ದರು.