ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಮಳೆಯು ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆಯಿತು.
ಜಿಲ್ಲೆಯಾದ್ಯಂತ ಬೆಳಿಗ್ಗೆ ಬಿಸಿಲ ತಾಪ ಹೆಚ್ಚಿದ್ದರಿಂದ ಶಕೆಯ ಅನುಭವವಿತ್ತು. ಮಧ್ಯಾಹ್ನದ ವೇಳೆಗೆ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಯಿತು. ಮಧ್ಯಾಹ್ನ ಸುಮಾರು 15 ನಿಮಿಷ ಸುರಿದ ಮಳೆಯು ಇಳೆಯನ್ನು ತಂಪಾಗಿಸಿತು. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ಹಿತಾನುಭವ ನೀಡಿತು.
ಸಾರ್ವಜನಿಕರು ಟೋಪಿ ಹಾಗೂ ರೈನ್ಕೋಟ್ ಧರಿಸಿ ಛತ್ರಿ ಹಿಡಿದು ಸಾಗುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಕೆಳಗೆ ಹಾಗೂ ಪೆಟ್ರೋಲ್ ಬಂಕ್ಗಳ ಬಳಿ ನಿಂತಿದ್ದ ದೃಶ್ಯ ಕಂಡುಬಂತು.
ಕೋಲಾರ, ಶ್ರೀನಿವಾಸಪುರ, ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ಮಳೆಯಾಗಿದ್ದು, ವರುಣ ದೇವನ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ತುಸು ನೆಮ್ಮದಿ ಸಿಕ್ಕಿದೆ. ಹಲವು ತಿಂಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಬೇಸಿಗೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಕ್ಕೆ ಜನ ಅಚ್ಚರಿಗೊಂಡರು.